ADVERTISEMENT

ಬಾಲಕಿ ಸಾವು: ಶಾಲೆಗೆ ಮುತ್ತಿಗೆ

ಶೌಚಾಲಯದಲ್ಲಿ ವಿದ್ಯಾರ್ಥಿನಿ ಕೂಡಿಹಾಕಿದ ಆರೋಪ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಕೋಲ್ಕತ್ತ(ಪಿಟಿಐ): ಇಲ್ಲಿನ ಕ್ರೈಸ್ಟ್‌ ಚರ್ಚ್ ಬಾಲಕಿಯರ ಪ್ರೌಢಶಾಲೆಯಲ್ಲಿ ಕಳೆದ ವಾರ ಹಿರಿಯ ವಿದ್ಯಾರ್ಥಿಗಳು ಶೌಚಾಲಯದಲ್ಲಿ ಕೂಡಿ ಹಾಕಿ
ಹೋಗಿದ್ದರಿಂದ ಆಘಾತಗೊಂಡಿದ್ದಳು ಎನ್ನಲಾದ 11 ವರ್ಷದ ಬಾಲಕಿ ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ  ನಡೆದಿದೆ.

ಬಾಲಕಿಯ ಸಾವಿನಿಂದ ರೊಚ್ಚಿಗೆದ್ದ ಪೋಷಕರು ಸ್ಥಳೀಯರೊಂದಿಗೆಗುರುವಾರ ಶಾಲಾ ಕಚೇರಿಗೆ ಮುತ್ತಿಗೆ ಹಾಕಿ, ಪೀಠೋಪಕರಣಗಳನ್ನು ಧ್ವಂಸ ಮಾಡಿದರು. ಬಾಲಕಿಯ ಸಾವಿಗೆ ಕಾರಣರಾದವರ ವಿರುದ್ಧ  ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪೋಷಕರ ಜತೆ ಮಾತುಕತೆ ನಡೆಸಿದರು. ಪ್ರತಿಭಟನೆ ಬಳಿಕ ಶಾಲೆಯ ಪ್ರಾಂಶುಪಾಲರು ಕ್ಷಮೆ ಕೋರಿದರು. ಶಾಲೆಯ ಸುತ್ತಮುತ್ತ ಪೊಲೀಸ್‌ ಭದ್ರತೆ ಯನ್ನು ಒದಗಿಸಲಾಗಿದೆ.

ಹಣ ಕೊಡಲು ಒತ್ತಾಯಿಸಿ ಹಿರಿಯ ವಿದ್ಯಾರ್ಥಿಗಳು  5ನೇ ತರಗತಿ ವಿದ್ಯಾರ್ಥಿನಿ ಒಯಿಂಡ್ರಿಲಾ ದಾಸ್‌ಳನ್ನು ಶಾಲೆ ಮುಗಿದ ನಂತರ ಶೌಚಾಲಯ ದಲ್ಲಿ ಕೂಡಿ ಹಾಕಿದ್ದರು. ಇದರಿಂದ ಆಕೆ ತೀವ್ರ ಆಘಾತಕೊ್ಕಳಗಾಗಿದ್ದಳು ಎಂದು ಆರೋಪಿಸಲಾಗಿದೆ.  ಬಾಲಕಿ ಶೌಚಾಲಯದ ಒಳಗಿನಿಂದ ಜೋರಾಗಿ ಕಿರುಚಿಕೊಂಡ ಬಳಿಕ ಕಸ ಗುಡಿಸುವಾತ ಬಾಗಿಲನ್ನು ತೆಗೆದು, ಆಕೆಯನ್ನು ಮನೆಗೆ ಕರೆತಂದು ಬಿಟ್ಟಿದ್ದನು ಎನ್ನಲಾಗಿದೆ. ಬಾಲಕಿ ಮಾನಸಿಕವಾಗಿ ಘಾಸಿಗೊಂಡಿದ್ದರಿಂದ ಪೋಷಕರು ಆಸ್ಪತ್ರೆಗೆ ಸೇರಿಸಿದ್ದರು. 

ಘಟನೆ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಪ್ರಾಂಶುಪಾಲರಾದ ಹೆಲೆನ್‌ ಸರ್ಕಾರ್‌ ಹೇಳಿದರೂ ನಂತರದಲ್ಲಿ ಪ್ರತಿಭಟನೆಗೆ ಮಣಿದು ಕ್ಷಮೆ ಕೋರಿ ತನಿಖೆ ನಡೆಸುವ ಭರವಸೆ ನೀಡಿದರು.ಶಾಲೆಯ ಮೊದಲ ಮಹಡಿಯ ಬಾಲ್ಕನಿಯಿಂದ ಧ್ವನಿವಧರ್ಕದ ಮೂಲಕ ಮಾತನಾಡಿದ ಅವರು ಘಟನೆ ದುರದೃಷ್ಟಕರ. ಇಂತಹ ಘಟನೆ ಮರು ಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಪೋಷಕರಿಗೆ ತಿಳಿಸಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೂರ ವಾಣಿಯಲ್ಲಿ ಪೋಷಕರ ಜತೆ ಮಾತನಾಡಿ, ಘಟನೆ ಬಗ್ಗೆ ಪರಿಶೀಲಿಸು ವುದಾಗಿ ತನಿಖೆಗೆ ಆದೇಶಿಸಿದ್ದಾರೆ.  ‘ಮಗಳನ್ನು ಕೂಡಿಹಾಕಿದ ವಿದ್ಯಾರ್ಥಿ ನಿಯರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ. ‘ನಾನು ನನ್ನ ಮಗಳನ್ನು ಕಳೆದು ಕೊಂಡೆ. ಆದರೆ ಈ ಘಟನೆಯಾದರೂ ಜಾಗೃತಿ ಮೂಡಿಸಿ ರ್‍ಯಾಗಿಂಗ್‌ ಪಿಡುಗಿ ನಿಂದ ಸಣ್ಣ ಮಕ್ಕಳನ್ನು ಉಳಿಸಲಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.