ನವದೆಹಲಿ: ಹೀನ ಅಪರಾಧ ಎಸಗುವ 16ರಿಂದ 18 ವರ್ಷದೊಳಗಿನ ಬಾಲಾರೋಪಿಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ)ಯಡಿ ಶಿಕ್ಷಿಸಲು ಬಾಲ ನ್ಯಾಯ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸಿದೆ.
ಈ ಬಗೆಯ ಬಾಲಾಪರಾಧಿಗಳಿಗೆ ಮರಣ ದಂಡನೆ, ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ಈ ತಿದ್ದುಪಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗುರುವಾರ ಸಂಪುಟದ ಪರಿಶೀಲನೆಗೆ ಕಳುಹಿಸಿರುವ ಈ ತಿದ್ದುಪಡಿ ಪ್ರಸ್ತಾವವನ್ನು ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಮಂಡಿಸಬಹುದಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಕೃಷ್ಣಾ ತೀರಥ್ ಸುದ್ದಿಗಾರರಿಗೆ ತಿಳಿಸಿದರು.
ಹೀನ ಅಪರಾಧಗಳ ವ್ಯಾಪ್ತಿಯಲ್ಲಿ ಕೊಲೆ, ಆಸಿಡ್ ದಾಳಿ, ಅತ್ಯಾಚಾರ ಮತ್ತಿತರ ಕೃತ್ಯಗಳು ಬರುತ್ತವೆ. ಅಪರಾಧದ ಕಠೋರತೆ, ಅಪರಾಧಿಯ ಹಿನ್ನೆಲೆ ಹಾಗೂ ಅಪರಾಧವನ್ನು ಯಾವ ಸನ್ನಿವೇಶದಲ್ಲಿ ನಡೆಸಲಾಗಿದೆ ಎಂಬುದರ ಬಗ್ಗೆ ಒಂದು ತಿಂಗಳ ಒಳಗಾಗಿ ಅವಲೋಕಿಸುವ ಅಧಿಕಾರವನ್ನು ಬಾಲ ನ್ಯಾಯ ಮಂಡಳಿಗೆ ನೀಡಲಾಗುತ್ತದೆ.
ಸಂಬಂಧಿಸಿದ ಬಾಲಾಪರಾಧಿಯನ್ನು ಕಾನೂನು ಕಟ್ಟಳೆಗೆ ಒಳಪಡಿಸಬಹುದೇ ಮತ್ತು ಐಪಿಸಿಯ ವಿವಿಧ ಕಾನೂನಿನಡಿ ಆತನಿಗೆ ಯಾವ ಶಿಕ್ಷೆ ವಿಧಿಸಬಹುದು ಮತ್ತು ಅಪರಾಧದ ಸನ್ನಿವೇಶವನ್ನು ಅರಿಯುವ ಸಾಮರ್ಥ್ಯ, ಶಿಕ್ಷಾರ್ಹತೆಯನ್ನು ಮಂಡಳಿಯೇ ನಿರ್ಧರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.