ಪಟ್ನಾ: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರ ಪುತ್ರ ಅರಿಜಿತ್ ಶಾಶ್ವತ್ ಪ್ರಕರಣ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಗೆ ಕಂಟಕವಾಗಿ ಪರಿಣಮಿಸಿದೆ.
ಭಾಗಲ್ಪುರ ಕೋಮುಲಗಭೆಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡು ಓಡಾಡುತ್ತಿರುವ ಶಾಶ್ವತ್ಗೆ ನ್ಯಾಯಾಲಯ ಅಥವಾ ಪೊಲೀಸರಿಗೆ ಶರಣಾಗುವಂತೆ ಜೆಡಿ(ಯು) ತಾಕೀತು ಮಾಡಿದೆ.
ಅರಿಜಿತ್ ತಪ್ಪಿಸಿಕೊಂಡು ಓಡಾಡುತ್ತಿರುವ ವಿಷಯವನ್ನು ವಿರೋಧ ಪಕ್ಷಗಳು ವಿಧಾನಸಭೆಯ ಒಳಗೆ ಮತ್ತು ಹೊರಗೆ ಪ್ರಸ್ತಾಪಿಸಿದ್ದು, ಆಡಳಿತಾರೂಢ ಜೆಡಿಯು ಮುಜುಗರ ಅನುಭವಿಸುತ್ತಿದೆ. ಹೀಗಾಗಿಯೇ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಮಂಗಳವಾರ ‘ಅರಿಜಿತ್ ಶರಣಾಗದಿದ್ದರೆ ಜೆಡಿಯು–ಬಿಜೆಪಿ ಬಾಂಧವ್ಯ ಹಾಳಾಗಬಹುದು’ ಎಂದು ಎಚ್ಚರಿಸಿದ್ದಾರೆ.
‘ಎಫ್ಐಆರ್ ಪ್ರಯೋಜನವಿಲ್ಲದ ಕಾಗದ’
ನನ್ನ ಪುತ್ರ ಯಾಕೆ ಶರಣಾಗಬೇಕು? ‘ಜೈ ಶ್ರೀರಾಮ್’ ಎಂದು ಹೇಳುವುದು ಅಪರಾಧವೇ? ಮಹಾತ್ಮ ಗಾಂಧಿ ಸಹ ‘ಹೇ ರಾಮ್’ ಎಂದು ಹೇಳಿದ್ದರು. ಪೊಲೀಸರು ದಾಖಲಿಸಿರುವ ಎಫ್ಐಆರ್ ‘ಪ್ರಯೋಜನವಿಲ್ಲದ ಕಾಗದ’. ಅದನ್ನು ಕಸದಬುಟ್ಟಿಗೆ ಎಸೆಯಬೇಕು ಎಂದು ಅಶ್ವಿನಿ ಚೌಬೆ ಹೇಳಿದ್ದಾರೆ.
‘ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಪೊಲೀಸರು ಹಾಗೂ ಕಾನೂನಾತ್ಮಕ ಸಂಸ್ಥೆಗಳ ವಿರುದ್ಧ ಹಾನಿಕಾರಕ ಹೇಳಿಕೆ ನೀಡುವುದರಿಂದ ದೂರ ಉಳಿಯಬೇಕು’ ಎಂದು ಚೌಬೆ ಹೇಳಿಕೆ ಕುರಿತು ತ್ಯಾಗಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.