ನವದೆಹಲಿ (ಪಿಟಿಐ): `ಪೂರ್ತಿ~ ಸಮೂಹದಲ್ಲಿ ಅನುಮಾನಾಸ್ಪದ ಹೂಡಿಕೆಗೆ ಸಂಬಂಧಿಸಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಆರೋಪ ಮಾಡುತ್ತಿರುವ ಕೇಂದ್ರದ ಆಡಳಿತಾರೂಢ ಕಾಂಗ್ರೆಸ್ನ ಬಾಯಿ ಮುಚ್ಚಿಸಲು ಬಿಜೆಪಿ ಇದೀಗ ವಾದ್ರಾ ಭೂ ಖರೀದಿ ಹಾಗೂ ಕಲ್ಲಿದ್ದಲು ಹಗರಣವನ್ನು ಅಸ್ತ್ರವನ್ನಾಗಿಸಿಕೊಂಡಿದೆ.
`ಅಕ್ರಮ ಭೂ ಖರೀದಿ ಆರೋಪ ಎದುರಿಸುತ್ತಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹರಗಣದಲ್ಲಿ ಪ್ರಧಾನಿ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ?~ ಎಂದು ಸವಾಲು ಹಾಕಿದೆ.
`ವಾದ್ರಾ ಭೂ ಖರೀದಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಮೌನ ವಹಿಸಿರುವುದು ಯಾಕೆ~ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. `ಕಲ್ಲಿದ್ದಲು ಹಗರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರವೇನು? ಯಾಕೆ ಇದನ್ನು ತನಿಖೆ ಮಾಡುತ್ತಿಲ್ಲ~ ಎಂದೂ ಅವರು ತಿರುಗೇಟು ನೀಡಿದ್ದಾರೆ.
ದಿಕ್ಕು ತಪ್ಪಿಸುವ ಹುನ್ನಾರ: ಬಿಜೆಪಿಯ ಸವಾಲಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, `ಗಡ್ಕರಿ ವಿರುದ್ಧದ ಆರೋಪ ಕುರಿತಂತೆ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯು ಹಳೆಯ ಆರೋಪಗಳನ್ನು ಪ್ರಸ್ತಾಪಿಸುತ್ತಿದೆ~ ಎಂದು ವ್ಯಂಗ್ಯವಾಡಿದೆ.
`ಬಿಜೆಪಿ ಒಡೆದ ಮನೆ. ಪಕ್ಷದ ಸದಸ್ಯರೆಲ್ಲ ಹತಾಶೆಯಿಂದ ಬಳಲುತ್ತಿದ್ದಾರೆ~ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಮನೀಷ್ ತಿವಾರಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.