ಮೊರಾದಾಬಾದ್ (ಪಿಟಿಐ): ಇಲ್ಲಿನ ಕಾಂತ್ ಪ್ರದೇಶದಲ್ಲಿ ಶುಕ್ರವಾರ ಬಿಜೆಪಿ ಕರೆದಿದ್ದ ‘ಮಹಾಪಂಚಾಯತ್’ನಲ್ಲಿ ಪಾಲ್ಗೊಳ್ಳದಂತೆ ಕಾರ್ಯಕರ್ತರ ಮೇಲೆ ವಿಧಿಸಿದ್ದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪಕ್ಕಾಗಿ ಪಕ್ಷದ ನಾಲ್ವರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ನಾಲ್ವರು ಸಂಸದರು ಮತ್ತು ಒಬ್ಬ ಶಾಸಕ ಸೇರಿದ್ದಾರೆ. ಮುಜಫ್ಫರ್ನಗರ ಗಲಭೆ ಆರೋಪಿ ಮತ್ತು ಸರ್ಧಾನ ಕ್ಷೇತ್ರದ ಬಿಜೆಪಿ ಶಾಸಕ ಸಂಗೀತ್ ಸೋಮ್, ಅಮ್ರೋಹ ಸಂಸದ ಕುನ್ವರ್ ಸಿಂಗ್ ತನ್ವಾರ್, ಸಂಭಲ್ ಸಂಸದ ಸತ್ಯಪಾಲ್ ಸೈನಿ, ರಾಂಪುರ ಸಂಸದ ನೇಪಾಲ್ ಸಿಂಗ್, ಮೊರಾದಾಬಾದ್ ಸಂಸದ ಕುನ್ವರ್ ಸರ್ವೇಶ್ ಕುಮಾರ್ ಸಿಂಗ್ ಅವರು ಬಂಧಿತರು.
ಈ ಮಧ್ಯೆ, ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಉದ್ರಿಕ್ತ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಿದ್ದರಿಂದ ಜಿಲ್ಲಾಧಿಕಾರಿ ಚಂದ್ರಕಾಂತ್ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಲಖನೌದಲ್ಲಿ ಸಂಸದ ಕುನ್ವರ್ ಸೇರಿದಂತೆ 210 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಮರೇಂದ್ರ ಸಿಂಗ್ ಹೇಳಿದ್ದಾರೆ.
ದೇವಸ್ಥಾನವೊಂದರಲ್ಲಿ ಧ್ವನಿವರ್ಧಕ ಹಾಕಿದ ಘಟನೆಯ ನಂತರ ಸಂಭವಿಸಿದ ಕೋಮು ಗಲಭೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ಘಟಕವು ಕಾಂತ್ನಲ್ಲಿ ಮಹಾಪಂಚಾಯತ್ ಅಥವಾ ಮಹಾಸಭೆ ಕರೆದಿತ್ತು. ಆದರೆ ರಾಜ್ಯ ಸರ್ಕಾರ ಇದರ ಮೇಲೆ ನಿಷೇಧಾಜ್ಞೆ ಹೇರಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.