ನವದೆಹಲಿ (ಪಿಟಿಐ): ಕರ್ನಾಟಕ ಬಿಜೆಪಿ ರಾಜಕೀಯ ಬಿಕ್ಕಟ್ಟು ಸಧ್ಯಕ್ಕೆ ಶಮನಗೊಂಡಿದ್ದು, ~ ಬೇಡಿಕೆ ಬಗ್ಗೆ ವರಿಷ್ಠ ಮಂಡಳಿಯು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು~ ಎಂದು ಪಕ್ಷವು ಬಂಡುಕೋರರಿಗೆ ಸುಳಿವು ನೀಡಿದೆ.
~ಸಚಿವರು ತಮ್ಮ ರಾಜೀನಾಮೆಗಳನ್ನು ಭೇಷತ್ತಾಗಿ ಹಿಂದಕ್ಕೆ ಪಡೆದುಕೊಂಡಿದ್ದು, ಕೆಲಸಕ್ಕೆ ಮರಳಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಪರಿಹಾರ ಪಡೆಯುವತ್ತ ನಾವು ಮುನ್ನಡೆದಿದ್ದೇವೆ~ ಎಂದು ಕರ್ನಾಟಕ ಬಿಜೆಪಿ ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಧರ್ಮೇಂದ್ರ ಪ್ರಧಾನ್ ಇಲ್ಲಿ ವರದಿಗಾರರಿಗೆ ತಿಳಿಸಿದರು.
ಬಂಡುಕೋರರ ಬೇಡಿಕೆ ಬಗ್ಗೆ ಪರಿಶೀಲಿಸುವ ವಿಚಾರದಲ್ಲಿ ವರಿಷ್ಠ ಮಂಡಳಿಗೆ ಹಿಂಜರಿಕೆ ಏನೂ ಇಲ್ಲ ಎಂಬುದಾಗಿ ಸ್ಪಷ್ಟ ಸುಳಿವು ನೀಡಿದ ಅವರು ~ಸೂಕ್ತ ಕ್ರಮವನ್ನು ಸೂಕ್ತ ಕಾಲದಲ್ಲಿ ಕೈಗೊಳ್ಳಲಾಗುವುದು~ ಎಂದು ಹೇಳಿದರು. ಇದನ್ನು ಎಲ್ಲರಿಗೂ ತಿಳಿಸಲಾಗಿದೆ ಎಂದೂ ಅವರು ನುಡಿದರು.
ಕರ್ನಾಟಕದ ಎಲ್ಲ ಬೆಳವಣಿಗೆಗಳ ಬಗ್ಗೆ ವರಿಷ್ಠ ಮಂಡಳಿಗೆ ಅರಿವಿದೆ. ನಾಯಕತ್ವದ ಜೊತೆಗೆ ಮಾತುಕತೆಯ ಬಳಿಕವೇ ಸಚಿವರು ರಾಜೀನಾಮೆಗಳನ್ನು ಹಿಂದಕ್ಕೆ ಪಡೆದಿದ್ದಾರೆ. ನಾಯಕತ್ವ ಬದಲಾವಣೆಯ ವಿಚಾರವನ್ನು ಎರಡು ಮೂರು ದಿನಗಳಲ್ಲಿ ಇತ್ಯರ್ಥ ಪಡಿಸಲಾಗುವುದು ಎಂಬುದಾಗಿ ವರಿಷ್ಠ ಮಂಡಳಿ ಬಂಡುಕೋರರಿಗೆ ಭರವಸೆ ಕೊಟ್ಟಿದೆ ಎಂದು ವರದಿಗಳು ತಿಳಿಸಿವೆ.
ಈ ಮಧ್ಯೆ ಭಿನ್ನಮತೀಯ ಸಚಿವರು ರಾಜೀನಾಮೆ ಪತ್ರ ಹಿಂದಕ್ಕೆ ಪಡೆದುದನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ವಾಗತಿಸಿದ್ದಾರೆ.
~ಸಚಿವರ ಬಗ್ಗೆ ನನಗೆ ಕೆಟ್ಟ ಅಭಿಪ್ರಾಯವಿಲ್ಲ. ಇದರಲ್ಲಿ ಸ್ವಂತ ಹಿತಾಸಕ್ತಿಗಳೂ ಇಲ್ಲ. ವರಿಷ್ಠ ಮಂಡಳಿಯು ಬಿಕ್ಕಟ್ಟನ್ನು ಬಗೆಹರಿಸುವುದು~ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.