ಪಟ್ನಾ (ಐಎಎನ್ಎಸ್): ಮಧ್ಯಾಹ್ನದ ಬಿಸಿಯೂಟದ ದುರಂತದ ಬೆನ್ನಲ್ಲೇ ಬಿಹಾರದ 3 ಲಕ್ಷ ಶಿಕ್ಷಕರು ಶೈಕ್ಷಣಿಕೇತರ ಈ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಜುಲೈ 25 ರಿಂದ ಬಿಸಿಯೂಟ ಯೋಜನೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಸರನ್ ಜಿಲ್ಲೆಯಲ್ಲಿ ವಾರದ ಹಿಂದಷ್ಟೇ ನಡೆದ ಬಿಸಿಯೂಟ ದುರಂತದಲ್ಲಿ 23 ಶಾಲಾ ಮಕ್ಕಳು ಮೃತಪಟ್ಟ ಘಟನೆಯ ನಂತರ ಶಿಕ್ಷಕರು ಸರ್ಕಾರದ ಈ ಯೋಜನೆಗೆ ನೆರವು ನೀಡಲು ಉದಾಸಿನತೆ ತಳೆದಿದ್ದಾರೆ.
`ಬಿಹಾರ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸಭೆಯಲ್ಲಿ ಈ ಯೋಜನೆ ಬಹಿಷ್ಕರಿಸುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು' ಎಂದು ಸಂಘದ ಅಧ್ಯಕ್ಷ ಬರಜ್ನಂದನ್ ಶರ್ಮಾ ತಿಳಿಸಿದರು.
`ಈ ಯೋಜನೆಗೆ ಬೇರೆ ಜನರನ್ನು ನೇಮಿಸುವಂತೆ ಹಾಗೂ ಶಿಕ್ಷಕರನ್ನು ಶೈಕ್ಷಣಿಕ ಕಾರ್ಯಗಳಲ್ಲಿ ಮಾತ್ರ ತೊಡಗಿಸುವಂತೆ ನಾವು ಅನೇಕ ಬಾರಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇವು. ಆದರೆ ಸರ್ಕಾರ ಇದನ್ನು ನಿರ್ಲಕ್ಷಿಸಿತು. ಎಲ್ಲ ಬಗೆಯ ಶೈಕ್ಷಣಿಕೇತರ ಕಾರ್ಯಗಳ ಒತ್ತಡ ಹೊರಲು ಶಿಕ್ಷಕರು ಸಿದ್ಧರಿಲ್ಲ' ಎಂದು ಶರ್ಮಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.