
ತ್ರಿಶೂರ್, ಕೇರಳ (ಪಿಟಿಐ): ಮನೆಯ ಕಾವಲುಗಾರನ ಮೇಲೆ ಐಷಾರಾಮಿ ಎಸ್ಯುವಿ ಹಮ್ಮರ್ ಹಾಯಿಸಿ ಕೊಂದ ಪ್ರಕರಣದಲ್ಲಿ ಬೀಡಿ ಉದ್ಯಮಿ ಮೊಹಮ್ಮದ್ ನಿಶಾಂಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ ಹೆಚ್ಚುವರಿಯಾಗಿ 24 ವರ್ಷಗಳ ಸೆರೆವಾಸ ಹಾಗೂ ₹80.30 ಲಕ್ಷ ದಂಡ ವಿಧಿಸಿದೆ.
ದಂಡದ ಮೊತ್ತದಲ್ಲಿ ₹ 50 ಲಕ್ಷವನ್ನು ಮೃತ ಕಾವಲುಗಾರ ಚಂದ್ರಬೋಸ್ ಪತ್ನಿಗೆ ನೀಡುವಂತೆ ಸೂಚಿಸಿದೆ. ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಕೆ.ಪಿ. ಸುಧೀರ್, ‘ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷ್ಯಗಳನ್ನು ನುಡಿದಿರುವ ನಿಶಾಂ ಪತ್ನಿ ಅಮಲ್ ವಿರುದ್ಧ ವಿಚಾರಣೆ ಆರಂಭಿಸುವಂತೆ’ ಪ್ರಾಸಿಕ್ಯೂಷನ್ಗೆ ಸೂಚಿಸಿದರು.
ನಿಶಾಂ ಗಾಡಿಯ ಡಿಕ್ಕಿಯಲ್ಲಿ ಗಾಯಗೊಂಡ ಚಂದ್ರಬೋಸ್ ಇದ್ದುದನ್ನು ನೋಡಿದ್ದೆ ಎಂದು ಅಮಲ್ ಮೊದಲು ಹೇಳಿಕೆ ನೀಡಿದ್ದರು. ವಿಚಾರಣೆ ಮುಂದುವರೆದಂತೆ ಅವರು ತಮ್ಮ ಹೇಳಿಕೆಯನ್ನು ಬದಲಿಸಿದ್ದರು. ನ್ಯಾಯಾಲಯ ತೀರ್ಪು ನೀಡುವ ಸಂದರ್ಭದಲ್ಲಿ ಮೃತ ಚಂದ್ರಬೋಸ್ ಕುಟುಂಬ ಸದಸ್ಯರು ನ್ಯಾಯಾಲಯದಲ್ಲಿ ಹಾಜರಿದ್ದರು. ತೀರ್ಪಿನ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಂದ್ರಬೋಸ್ ಪತ್ನಿ ಜಮಂತಿ, ‘ನಮಗೆ ನ್ಯಾಯ ಸಿಗಲಿಲ್ಲ. ಇದು ಅಪಘಾತವಲ್ಲ. ನಿಶಾಂ ಬೇಕಂತಲೇ ನನ್ನ ಗಂಡನ ಮೇಲೆ ಗಾಡಿ ಓಡಿಸಿದ್ದ. ಅವರು ತಪ್ಪಿಸಿಕೊಳ್ಳಲು ಓಡಿದಾಗ ಗಾಡಿಯಿಂದ ಗೋಡೆಗೆ ಗುದ್ದಿಸಿದ್ದ. ಅವನನ್ನು ಗಲ್ಲಿಗೆ ಏರಿಸಬೇಕಿತ್ತು’ ಎಂದು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಹೋಗುವುದಾಗಿ ಮೃತ ಚಂದ್ರಬೊಸ್ ಅವರ ತಾಯಿ ತಿಳಿಸಿದ್ದಾರೆ. ಕೇರಳ ಗೃಹ ಸಚಿವ ರಮೇಶ್ ಚೆನ್ನಿತಾಲ ಅವರೂ ಈ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಹೋಗುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಡಿಕ್ಕಿ ಹೊಡೆಸಿ, ಹಲ್ಲೆ ನಡೆಸಿದ್ದ...
ತಡರಾತ್ರಿಯಲ್ಲಿ ಪಾರ್ಟಿ ಮುಗಿಸಿ 2014ರ ಜನವರಿ 29ರಂದು ನಿಶಾಂತ್ ತ್ರೀಶೂರ್ನ ಶೋಭಾ ಸಿಟಿ ಆಪಾರ್ಟ್ಮೆಂಟ್ನಲ್ಲಿ ಇರುವ ತಮ್ಮ ಮನೆಗೆ ತಮ್ಮ ಹಮ್ಮರ್ ಎಸ್ಯುವಿಯಲ್ಲಿ ಹಿಂತಿರುಗಿದ್ದರು.
ಆ ದಿನ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾವಲುಗಾರ ಚಂದ್ರಬೋಸ್ ಗೇಟ್ ತೆರೆಯುವಲ್ಲಿ ಸ್ವಲ್ಪ ನಿಧಾನ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ನಿಶಾಂ ಕುಡಿದ ಮತ್ತಿನಲ್ಲಿ ತಮ್ಮ ಹಮ್ಮರ್ ಅನ್ನು ಚಂದ್ರಬೋಸ್ ಮೇಲೆ ನುಗ್ಗಿಸಿದ್ದರು. ಎಸ್ಯುವಿಯ ಬಂಪರ್ಗೆ ಚಂದ್ರಬೋಸ್ ಸಿಲುಕಿದ್ದಂತೆಯೇ ಅದನ್ನು ಅಪಾರ್ಟ್ಮೆಂಟ್ನ ಕಾಂಪೌಂಡ್ಗೆ ಅಪ್ಪಳಿಸಿದ್ದರು. ಇವೆಲ್ಲವೂ ಅಪಾರ್ಟ್ಮೆಂಟ್ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ನಂತರ ಚಂದ್ರಬೋಸ್ ಅವರನ್ನು ಎಸ್ಯುವಿಯ ಹಿಂಬದಿಯಲ್ಲಿ ಹಾಕಿಕೊಂಡು ಪಾರ್ಕಿಂಗ್ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಬೋಸ್ ಮೇಲೆ ನಿಶಾಂ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಪಾರ್ಟ್ಮೆಂಟ್ನ ಇತರರು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸದರೂ ಅವರನ್ನು ನಿಶಾಂ ತಡೆದಿದ್ದರು.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದರು. ಚಂದ್ರಬೋಸ್ ಆಸ್ಪತ್ರೆಯಲ್ಲಿ ಫೆಬ್ರುವರಿ 16ರಂದು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.