ADVERTISEMENT

ಬೆಲೆ ಏರಿಕೆ ತಡೆಗೆ ಸಂಘಟಿತ ಕ್ರಮ: ಭಾರತ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 17:25 IST
Last Updated 16 ಫೆಬ್ರುವರಿ 2011, 17:25 IST

ನವದೆಹಲಿ (ಪಿಟಿಐ): ಜಾಗತಿಕ ಸಮಸ್ಯೆಗಳಾದ ಏರುತ್ತಿರುವ ಆಹಾರ ಬೆಲೆ, ವಿಚಿದ್ರಕಾರಕ ರೀತಿ ಹಣದ ಹರಿವು ಮತ್ತು ದುರ್ಬಲ ಆರ್ಥಿಕ ಚೇತರಿಕೆ ವಿಷಯಗಳ ಪರಿಹಾರಕ್ಕೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಜಿ-20 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ‘ಸಂಘಟಿತ ಪ್ರಯತ್ನ ನಡೆಸಬೇಕು’ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಒತ್ತಾಯಿಸುವ ನಿರೀಕ್ಷೆ ಇದೆ.

ತೀವ್ರ ಆರ್ಥಿಕ ಹಿಂಜರಿತ ಕಂಡಿದ್ದ ಜಾಗತಿಕ ಆರ್ಥಿಕತೆಯ ಮಟ್ಟ ಈಗ ಸುಧಾರಿಸುತ್ತಿದೆ. ಆದರೆ ಚೇತರಿಕೆ ಮಟ್ಟ ತೃಪ್ತಿಕರವಾಗಿಲ್ಲ ಮತ್ತು ಸಮತೋಲನದಿಂದ ಕೂಡಿಲ್ಲ. ಇದರಿಂದ ಆರ್ಥಿಕತೆ ಮೇಲೆ ಮಹತ್ವದ ಪರಿಣಾಮಗಳಾಗುತ್ತದೆ. ಇಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿ-20 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಸಂಘಟಿತ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎನ್ನುವುದು ಪ್ರಣವ್ ಇಂಗಿತವಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಣವ್ ಗುರುವಾರ ಪ್ಯಾರಿಸ್‌ಗೆ ಪ್ರಯಾಣ ಬೆಳೆಸುವರು. ಫೆ.18ರಂದು ಜಿ-20 ರಾಷ್ಟ್ರಗಳ ಆರ್ಥಿಕ ಸಚಿವರ ಶೃಂಗ ಆರಂಭವಾಗಲಿದೆ. ಈ ಸಭೆಗೂ ಮುನ್ನ ಈ ಇಪ್ಪತ್ತು ದೇಶಗಳ ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆಯೂ ನಡೆಯಲಿದೆ. ಫ್ರಾನ್ಸ್‌ನ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.