ADVERTISEMENT

ಬೊಫೋರ್ಸ್‌ ಹಗರಣ: ಮರು ತನಿಖೆ ಅನುಮತಿಗೆ ಮನವಿ

ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಪತ್ರ ಬರೆದ ಸಿಬಿಐ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
ಬೊಫೋರ್ಸ್‌ ಹಗರಣ: ಮರು ತನಿಖೆ ಅನುಮತಿಗೆ ಮನವಿ
ಬೊಫೋರ್ಸ್‌ ಹಗರಣ: ಮರು ತನಿಖೆ ಅನುಮತಿಗೆ ಮನವಿ   

ನವದೆಹಲಿ: ಬೊಫೋರ್ಸ್ ಹಗರಣದ ಮರುತನಿಖೆಗೆ ಅನುಮತಿ ನೀಡಬೇಕು ಎಂದು ಸಿಬಿಐ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಹಿಂದೂಜಾ ಸೋದರರ ವಿರುದ್ಧದ ಎಫ್‌ಐಆರ್‌ ಅನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿತ್ತು. ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂಬ  ಮನವಿಯನ್ನು 2005ರಲ್ಲಿ ಕೇಂದ್ರದ ಯುಪಿಎ ಸರ್ಕಾರ ತಿರಸ್ಕರಿಸಿ
ತ್ತು. ಮೇಲ್ಮನವಿಗೆ ಅನುಮತಿ ನಿರಾಕರಿಸಿದ ತನ್ನ ನಿರ್ಧಾರವನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಿಬಿಐ ಪತ್ರ ಬರೆದಿದೆ.

‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಈ ಹಗರಣದಲ್ಲಿ ನಿರ್ದೋಷಿ ಎಂದು ದೆಹಲಿ ಹೈಕೋರ್ಟ್‌ ಘೋಷಿಸಿತ್ತು. ಪ್ರಕರಣದ ತನಿಖೆಯನ್ನು ಮುಂದುವರೆಸಲು ನಾವು ಸಿದ್ಧರಿದ್ದೆವು. ಆದರೆ ಆಗಿನ ಸರ್ಕಾರ ಅನುಮತಿ ನೀಡಲು ನಿರಾಕರಿಸಿತ್ತು’ ಎಂದು ಸಿಬಿಐ ಮೂಲಗಳು ಮಾಹಿತಿ ನೀಡಿವೆ.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನಡೆಸಿದ್ದ ತನಿಖೆಯನ್ನು ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ನಾಶ ಮಾಡಿತು’ ಎಂದು ಈಚೆಗೆ ಖಾಸಗಿ ಪತ್ತೇದಾರರೊಬ್ಬರು ಆರೋಪಿಸಿದ್ದರು. ಜತೆಗೆ ತಾವು ನಡೆಸಿದ್ದ ತನಿಖೆಗೆ ಸಂಬಂಧಿಸಿದಂತೆ ತಮ್ಮ ಬಳಿ ದಾಖಲೆಗಳಿರುವುದಾಗಿ ಹೇಳಿದ್ದರು. ಬುಧವಾರವಷ್ಟೇ ಸಿಬಿಐ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ದರು. ಖಾಸಗಿ ಪತ್ತೇದಾರರ ಆರೋಪಗಳು ಮತ್ತು ಅವರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಲು ಬಯಸುವುದಾಗಿ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಬೆಳವಣಿಗೆಯ ಕೆಲವೇ ದಿನಗಳಲ್ಲಿ ಸಿಬಿಐ ಸರ್ಕಾರಕ್ಕೆ ಈ ಪತ್ರ ಬರೆದಿದೆ.

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಜತೆ ಸಿಬಿಐ ಅಧಿಕಾರಿಗಳು ಈಚೆಗೆ ಸಭೆ ನಡೆಸಿದ್ದರು. ಪ್ರಕರಣವನ್ನು ಮುಂದುವರೆಸಲು ಸರ್ಕಾರ ಅನುಮತಿ ನಿರಾಕರಿಸಿದ್ದರ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದರು. ಬೋಫೋರ್ಸ್ ಫಿರಂಗಿಗಳ ಖರೀದಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳು ಕಾಣೆಯಾಗಿವೆ ಎಂದು ರಕ್ಷಣಾ ಸಚಿವಾಲಯವು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಮಾಹಿತಿ ನೀಡಿತ್ತು. ‘ಕಾಣೆಯಾಗಿರುವ ದಾಖಲೆಗಳನ್ನು ಶೀಘ್ರವೇ ಪತ್ತೆ ಮಾಡಿ’ ಎಂದು ಸಚಿವಾಲಯಕ್ಕೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.