ADVERTISEMENT

ಭದ್ರತಾ ಪಡೆ ಗುಂಡಿಗೆ ಕಾರ್ಮಿಕ ಬಲಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಚೆನ್ನೈ /ಕಡಲೂರು (ಪಿಟಿಐ ): ತಮಿಳು­ನಾಡಿನ ನೆವೆಲಿ ಲಿಗ್ನೈಟ್‌ ಕಾರ್ಪೊ­ರೇಷನ್‌ ಘಟಕದಲ್ಲಿ ಸೋಮವಾರ  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐ­ಎಸ್‌ಎಫ್‌) ಸಿಬ್ಬಂದಿ ಗುಂಡಿಗೆ ಗುತ್ತಿಗೆ ಕಾರ್ಮಿಕನೊಬ್ಬ ಬಲಿ­ಯಾಗಿದ್ದಾನೆ.

ಪರವಾನಗಿ ಇಲ್ಲದೆ ನೆವೆಲಿ ಲಿಗ್ನೈಟ್‌ ಕಾರ್ಪೊರೇಶನ್‌ನ  ಗಣಿ ಪ್ರವೇಶಿಸಲು ಮುಂದಾದ ಗುತ್ತಿಗೆ ಕಾರ್ಮಿಕರನ್ನು ಸಿಐಎಸ್‌ಎಫ್‌ ಸಿಬ್ಬಂದಿ ತಡೆದಾಗ      ಇಬ್ಬರ ಮಧ್ಯೆ ವಾಗ್ವಾದ ಆರಂಭ­ವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ­ದಾಗ ಸಿಐಎಸ್‌ಎಫ್‌ ಸಿಬ್ಬಂದಿ ಹಾರಿಸಿದ ಗುಂಡಿಗೆ ಕಾರ್ಮಿಕರ ಗುಂಪಿನ ಮುಖಂಡ ಟಿ. ಸುರೇಶ್‌ (31) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಸಿಐಎಸ್‌ಎಫ್‌ ಸಿಬ್ಬಂದಿ ಮತ್ತು  ನೆವೆಲಿ ಲಿಗ್ನೈಟ್‌ ಕಾರ್ಪೊರೇ­ಶನ್‌ ಕಚೇರಿ ಮೇಲೆ  ಬಾರಿ ದಾಳಿ ನಡೆಸಿ ಪ್ರವೇಶ ದ್ವಾರಗಳನ್ನು ಧ್ವಂಸ­ಗೊಳಿಸಿದ್ದಾರೆ.

ಉದ್ರಿಕ್ತ ಗುಂಪು ಸಿಐಎಸ್‌ಎಫ್‌ ಸಿಬ್ಬಂದಿ ಮತ್ತು ಸಂಸ್ಥೆಯ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು,  ಕೆಲಕಾಲ  ಆತಂಕದ ವಾತಾವರಣ ನಿರ್ಮಾಣ­ವಾಗಿತ್ತು. ಗುಂಪನ್ನು ಚದುರಿಸಲು  ಪೊಲೀಸರು ಲಘು ಲಾಠಿ ನಡೆಸಿ ಮತ್ತು ಅಶ್ರುವಾಯು ಪ್ರಯೋಗಿಸಿದರು.

ಸದ್ಯ ಪರಿಸ್ಥಿತಿ  ಹತೋಟಿ­ಯಲ್ಲಿ­ದ್ದರೂ,  ಇನ್ನೂ ತ್ವೇಷಮಯ ವಾತಾವ­ರ­ಣ­ವಿದೆ. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳ ಮತ್ತು ಸುತ್ತಲಿನ ಗ್ರಾಮ­ದಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ­ಯನ್ನು ನಿಯೋಜಿಸಲಾಗಿದೆ.

ಈ ಘಟನೆಯಲ್ಲಿ 20 ಕಾರ್ಮಿಕರು ಮತ್ತು ಮೂವರು ಸಿಐಎಸ್‌ಎಫ್‌ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಸಂಸ್ಥೆಯ ಆಸ್ಪತ್ರೆಗೆ ಸೇರಿಸಲಾಗಿದೆ.
ಗುಂಡು ಹಾರಿಸಿದ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾ­ಲ­ಯಕ್ಕೆ ಹಾಜರು ಪಡಿಸಲಾ­ಯಿತು. ಬಂಧಿತನನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಯ ವಿವರ ಪಡೆದ ಜಿಲ್ಲಾಧಿ­ಕಾರಿ ತನಿಖೆ ನಡೆಸಿ ವರದಿ ನೀಡುವಂತೆ   ಉಪ ವಿಭಾಗಾಧಿಕಾರಿಗೆ ಆದೇಶಿಸಿ­ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.