ADVERTISEMENT

ಭಾರತೀಯ ಕಾರ್ಮಿಕರು ರಕ್ತ, ಬೆವರು ಸುರಿಸಿ ಕಟ್ಟಿದ್ದು ತಾಜ್ ಮಹಲ್: ಯೋಗಿ ಆದಿತ್ಯನಾಥ್

ಏಜೆನ್ಸೀಸ್
Published 17 ಅಕ್ಟೋಬರ್ 2017, 9:07 IST
Last Updated 17 ಅಕ್ಟೋಬರ್ 2017, 9:07 IST
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)   

ಲಖನೌ: ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ ಅನ್ನು ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ಕಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ ತಾಜ್‌ ಮಹಲ್ ಒಂದು ಕಪ್ಪು ಚುಕ್ಕೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.

ಅದನ್ನು ಯಾರು ಕಟ್ಟಿಸಿದರು, ಯಾಕೆ ಕಟ್ಟಿಸಿದರು ಎಂಬುದು ಮುಖ್ಯವಲ್ಲ. ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ಕಟ್ಟಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜ್‌ ಮಹಲ್ ಒಂದು ಪ್ರಮುಖ ಸ್ಮಾರಕ ಎಂಬುದನ್ನು ಒತ್ತಿಹೇಳಿದ ಅವರು, ಪ್ರವಾಸಿಗರಿಗೆ ಸೌಕರ್ಯಗಳನ್ನೊದಗಿಸುವುದು ಮತ್ತು ಅವರ ಸುರಕ್ಷತೆ ನಮ್ಮ ಸರ್ಕಾರದ ಆದ್ಯತೆ ಎಂದೂ ಹೇಳಿದರು.

ADVERTISEMENT

ಯೋಗಿ ಆದಿತ್ಯನಾಥ್ ಅವರು ಇದೇ ತಿಂಗಳ 25ರಂದು ಆಗ್ರಾಕ್ಕೆ ತೆರಳಲಿದ್ದು, ಆ ಸಂದರ್ಭ ತಾಜ್ ಮಹಲ್ ಸೇರಿ ಇತರ ಸ್ಮಾರಕಗಳಿಗೆ ಭೇಟಿ ನೀಡುವ ನಿರೀಕ್ಷೆ ಇದೆ.

ಮೊಘಲರು ದ್ರೋಹಿಗಳು ಎಂದಿದ್ದ ಸಂಗೀತ್ ಸೋಮ್, ಅವರಿಂದ ನಿರ್ಮಾಣವಾದ ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲಿ ಕಪ್ಪು ಚುಕ್ಕೆ. ಅದನ್ನು ಕಟ್ಟಿಸಿದ ಶಹಜಹಾನ್‌ನಂಥವರು ನಮ್ಮ ಇತಿಹಾಸದ ಭಾಗವಾದರೆ ಅದು ಖೇದಕರ. ಅಂಥ ಇತಿಹಾಸವನ್ನು ನಾವು ಬದಲಿಸುತ್ತೇವೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.