ನವದೆಹಲಿ: ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ಕಾರ್ಯನಿರ್ವಹಣೆ ಮೇಲ್ವಿಚಾರಣೆ ನಡೆಸುವ ಸಮಿತಿ ಸದಸ್ಯರ ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಎಂಸಿಐನ ಮೇಲ್ವಿಚಾರಣೆ ನಡೆಸುವ ಸಮಿತಿ ಸದಸ್ಯರ ಕಾರ್ಯಾವಧಿ ಪೂರ್ಣಗೊಂಡಿದ್ದು, ಹೊಸ ಸದಸ್ಯರ ನೇಮಕಕ್ಕೆ ಐದು ಜನ ಪರಿಣತ ವೈದ್ಯರ ಹೆಸರು ಪ್ರಸ್ತಾಪಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಅನುಮತಿ ಕೋರಿತ್ತು.
ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೆಹರ್ ನೇತೃತ್ವದ ಐದು ಜನ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರದ ಪ್ರಸ್ತಾವನೆಗೆ ಮೆಚ್ಚುಗೆ ಸೂಚಿಸಿ ಮೇಲ್ವಿಚಾರಣಾ ಸಮಿತಿಗೆ ನೇಮಿಸಲು ಸಮ್ಮತಿ ನೀಡಿದೆ.
ಕಳೆದ ವರ್ಷ ಮೇ 2ರಂದು ಎಂಸಿಐ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಒಂದು ವರ್ಷದ ಅವಧಿಗೆ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತ್ತು.
ಎಂಬಿಬಿಎಸ್ ಮತ್ತು ಬಿಡಿಎಸ್ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಎಂಸಿಐ ಮೇಲ್ವಿಚಾರಣಾ ಸಮಿತಿಯನ್ನು ವರ್ಷಗಳ ವರೆಗೆ ಮುಂದುವರಿಸಬೇಕಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು.
ಮೇಲ್ವಿಚಾರಣಾ ಸಮಿತಿ ಬದಲಾವಣೆಗೆ ಹೊಸ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಎಂಸಿಐ ಕಾರ್ಯಾಚರಣೆ ಗಮನಿಸಲು ಸರ್ಕಾರ ಪರ್ಯಾಯ ವ್ಯವಸ್ಥೆ ರೂಪಿಸುವವರೆಗೂ ಈ ಸಮಿತಿಯು ಮೇಲ್ವಿಚಾರಣೆ ನಡೆಸುತ್ತದೆ ಎಂದು ತಿಳಿಸಿತ್ತು.
ಪ್ರಸ್ತಾವನೆಯಲ್ಲಿರುವ ಯಾವುದೇ ವೈದ್ಯರು ಸಮಿತಿಯ ಭಾಗವಾಗಲು ಒಪ್ಪದಿದ್ದರೆ ಅವರ ಜಾಗಕ್ಕೆ ಮತ್ತೊಬ್ಬರನ್ನು ಕೇಂದ್ರ ಸರ್ಕಾರವೇ ನೇಮಿಸಲು ಕೋರ್ಟ್ ಅನುವು ಮಾಡಿಕೊಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.