ADVERTISEMENT

ಭಾರತ-ಅಮೆರಿಕ ಬಾಂಧವ್ಯ ಗಟ್ಟಿ: ಕೆರ್ರಿ ಆಶಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ನವದೆಹಲಿ (ಪಿಟಿಐ): ಆರ್ಥಿಕತೆ, ರಕ್ಷಣೆ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಎದುರಾಗುವ ಪ್ರಮುಖ ಸವಾಲುಗಳನ್ನು ಎದುರಿಸಲು ಅಮೆರಿಕ ಹಾಗೂ ಭಾರತ ಸಮರ್ಥವಾಗಿರುವುದರಿಂದ ಉಭಯ ದೇಶಗಳ ನಡುವಣ ಬಾಂಧವ್ಯ ಗಟ್ಟಿಯಾಗುತ್ತದೆ ಎಂಬ ಆಶಯವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ವ್ಯಕ್ತಪಡಿಸಿದರು.

ಭಾರತ ಪ್ರವಾಸಕ್ಕೆ ಆಗಮಿಸಿರುವ ಕೆರ್ರಿ ಭಾನುವಾರ ಇಲ್ಲಿನ ಸಭೆಯಲ್ಲಿ ಮಾತನಾಡಿದರು. `ಉತ್ತಮ ಭವಿಷ್ಯಕ್ಕಾಗಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಅತಿ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳು ಸಂಘಟಿತವಾಗಿ ನಮ್ಮ ಮುಂದಿರುವ ಪ್ರಬಲ ಸವಾಲುಗಳನ್ನು ಎದುರಿಸಬಹುದು' ಎಂದರು. ಅಮೆರಿಕದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಅದರಲ್ಲೂ ತಾಂತ್ರಿಕತೆ ಹಾಗೂ ಎಂಜಿನಿಯರಿಂಗ್ ಕ್ಷೇತ್ರದ ಉನ್ನತಿಯಲ್ಲಿ ಭಾರತೀಯ ಮೂಲದವರ ಶ್ರಮವನ್ನು ಕೆರ್ರಿ ಶ್ಲಾಘಿಸಿದರು.

ಪ್ರವಾಹ ಸಂತ್ರಸ್ತರಿಗೆ ಅಮೆರಿಕ ನೆರವು
ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗಾಗಿ ಅಮೆರಿಕ ಅಂದಾಜು 83 ಕೋಟಿ ರೂಪಾಯಿ (1.5 ಲಕ್ಷ ಡಾಲರ್) ನೆರವು ನೀಡಲಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಜೆ ಪೊವೆಲ್ ಪ್ರಕಟಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟವರಿಗೆ ಅಮೆರಿಕದ ಪರವಾಗಿ ತಾವು ಅತೀವ ಸಂತಾಪ ಸೂಚಿಸುತ್ತಿರುವುದಾಗಿ ನ್ಯಾನ್ಸಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT