ADVERTISEMENT

ಭೀಮ್‌ಸೇನ್ ಜೋಷಿ ನಿಧನಕ್ಕೆ ಗಣ್ಯರ ಸಂತಾಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:45 IST
Last Updated 24 ಜನವರಿ 2011, 19:45 IST

ನವದೆಹಲಿ (ಪಿಟಿಐ, ಐಎಎನ್‌ಎಸ್): ‘ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ಸೂರ್ಯ ಮುಳುಗಿದ’, ‘ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ’, ‘ಅವರು ಭಾರತ ರತ್ನವಷ್ಟೇ ಅಲ್ಲ, ವಿಶ್ವರತ್ನ’... ಇಂತಹ ನೂರಾರು ಮಾತುಗಳ ಮೂಲಕ ಸಂಗೀತ ಲೋಕದ ದಿಗ್ಗಜರು, ದೇಶದ ಪ್ರಮುಖ ನಾಯಕರು ಪಂಡಿತ್ ಭೀಮ್‌ಸೇನ್ ಜೋಷಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಜಸ್‌ರಾಜ್, ಕರ್ನಾಟಕ ಸಂಗೀತದ ದಿಗ್ಗಜ ಪಂಡಿತ್ ಬಾಲಮುರಳೀಕೃಷ್ಣ, ಇತರ ಪ್ರಮುಖ ಗಾಯಕರಾದ ಬಸಂತ್ ಗರುಡ್, ಲತಾ ಮಂಗೇಷ್ಕರ್, ಶುಭಾ ಮುದ್ಗಲ್, ಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್, ನಾಟಕಕಾರ ಗಿರೀಶ್ ಕಾರ್ನಾಡ್, ಕಲಾವಿದರಾದ ಸುರೇಶ್ ವಾಡ್ಕರ್, ಆರತಿ ಅಂಕಿಲ್ಕರ್- ತಿಕೇಕರ್, ಅನೂಪ್ ಜಲೋಟಾ, ಬೇಗಂ ಪರ್ವೀನ್ ಸುಲ್ತಾನಾ, ಶೌನಕ್ ಅಭಿಷೇಕಿ, ಶಂಕರ್ ಮಹಾದೇವನ್, ರಾಕೇಶ್ ಚೌರಾಸಿಯಾ, ಅಜಯ್ ಚಕ್ರವರ್ತಿ ಸಹಿತ ಹಲವಾರು ಮಹಾನ್ ಕಲಾವಿದರು ಬಾಷ್ಪಾಂಜಲಿ ಸಲ್ಲಿಸಿದ್ದಾರೆ.

‘ಜೋಷಿ ಅವರು ಹಿಂದೂಸ್ತಾನಿ ಸಂಗೀತದ ಕೊಹಿನೂರ್. ಸೂರ್ಯೋದಯದ ಸಮಯದಲ್ಲೇ ಸೂರ್ಯಾಸ್ತವಾದ ಅನುಭವ ನನಗಾಗಿದೆ’ ಎಂದು ಪಂಡಿತ್ ಜಸ್‌ರಾಜ್ ಕಂಬನಿ ಮಿಡಿದಿದ್ದಾರೆ. ‘ಅಕ್ಬರನ ಆಸ್ಥಾನದಲ್ಲಿದ್ದ ತಾನ್‌ಸೇನ್ ಬಳಿಕ ಭಾರತ ಕಂಡ ಅತ್ಯಂತ ದೊಡ್ಡ ಸಂಗೀತ ಕಲಾವಿದರೆಂದರೆೆ ಭೀಮ್‌ಸೇನ್ ಜೋಷಿ’ ಎಂದು ಬಸಂತ್ ಗರುಡ್ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.