ನವದೆಹಲಿ (ಪಿಟಿಐ): ಭ್ರಷ್ಟಾಚಾರ ಪಿಡುಗಿನ ವಿರುದ್ಧ ರಾಷ್ಟ್ರದುದ್ದಕ್ಕೂ ಯಾತ್ರೆ ಕೈಗೊಳ್ಳುವುದಾಗಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಗುರುವಾರ ಪ್ರಕಟಿಸಿದ್ದಾರೆ.`ಭ್ರಷ್ಟಾಚಾರದ ವಿರುದ್ಧ ನಾನು ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದೇನೆ.
ಯಾತ್ರೆಯ ಹೆಸರು, ವೇಳಾಪಟ್ಟಿ ಮತ್ತು ಇತರ ವಿವರಗಳ ಬಗ್ಗೆ ಪಕ್ಷದ ಜತೆ ಚರ್ಚಿಸಿ ನಿರ್ಧರಿಸುತ್ತೇನೆ. ಉತ್ತಮ ಆಡಳಿತ ಮತ್ತು ಶುದ್ಧ ರಾಜಕೀಯ ಯಾತ್ರೆಯ ಪ್ರಮುಖ ವಿಷಯ ಆಗಿರುತ್ತದೆ~ ಎಂದು 83 ವರ್ಷದ ನಾಯಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿಜೆಪಿಯೊಳಗಿನ ನಾಯಕತ್ವದ ವಿವಾದವನ್ನು ಇದು ಬಗೆಹರಿಸುತ್ತದೆಯೇ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಡ್ವಾಣಿ ಅವರು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವರೇ ಎಂದು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸದೆ ನುಣುಚಿಕೊಂಡರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದು. ಚುನಾವಣೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿದ್ದರು.
`ಎಲ್ಲಾ ಚುನಾವಣೆ ಸಂದರ್ಭದಲ್ಲಿ ಚುನಾವಣೆಗೆ ಮೊದಲು ಪಕ್ಷವು ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಪಕ್ಷದ ಅಧ್ಯಕ್ಷರಿಗೆ ಹಾಗೆ ಹೇಳುವ ಹಕ್ಕು ಇದೆ~ ಎಂದು ಅಡ್ವಾಣಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.ಭ್ರಷ್ಟಾಚಾರದ ವಿರುದ್ಧದ ತಮ್ಮ ಯಾತ್ರೆಯನ್ನು ನವೆಂಬರ್ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೆ ಮೊದಲು ಮುಕ್ತಾಯಗೊಳಿಸುವುದಾಗಿ ಅವರು ಹೇಳಿದ್ದಾರೆ.
2ಜಿ ತರಂಗಾಂತರ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂಬ ಪ್ರತಿಪಕ್ಷದ ಬೇಡಿಕೆಗೆ ಒತ್ತಾಯಿಸುವುದರಲ್ಲೇ ಕಳೆದ ಚಳಿಗಾಲದ ಸಂಸತ್ ಅಧಿವೇಶನ ಮುಕ್ತಾಯಗೊಂಡಿತು. ಯಾತ್ರೆ ಕೈಗೊಳ್ಳುವ ವಿಷಯ ಈ ಸಂದರ್ಭದಲ್ಲಿ ತಮಗೆ ಮೊದಲು ಹೊಳೆಯಿತು ಎಂದು ಅವರು ತಿಳಿಸಿದ್ದಾರೆ.
ಯಾತ್ರೆ ಬಗ್ಗೆ ಪಕ್ಷದ ಉನ್ನತ ನಾಯಕರಿಗೆ ಮಂಗಳವಾರ ರಾತ್ರಿಯ ಸಭೆಯಲ್ಲಿ ತಿಳಿಸಿರುವುದಾಗಿಯೂ ಹೇಳಿದ್ದಾರೆ.`ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಗುರುವಾರ ಬೆಳಿಗ್ಗೆ ಸಭೆಯಲ್ಲಿ ಪಾಲ್ಗೊಳ್ಳಲು ನಮ್ಮ ಮನೆಗೆ ಆಗಮಿಸಿದ್ದರು. ಆಗ ಈ ವಿಷಯದ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಯಾತ್ರೆಗೆ ಪಕ್ಷದ ಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ~ ಎಂದು ಅಡ್ವಾಣಿ ತಿಳಿಸಿದ್ದಾರೆ.
ಲಾರಿಯನ್ನು ರಥವಾಗಿ ಪರಿವರ್ತಿಸಿ ನಡೆಸಿದ ಅವರ ಹಿಂದಿನ ಯಾತ್ರೆಯಂತೆಯೇ ಈ ಯಾತ್ರೆಯೂ ಅದೇ ರೂಪದಲ್ಲಿರುತ್ತದೆ.ಯಾತ್ರೆಯ ಉದ್ದೇಶ, ಉತ್ತಮ ಆಡಳಿತ ಮತ್ತು ಶುದ್ಧ ರಾಜಕೀಯ ಆಗಿರಬೇಕು ಎಂದು ಅಡ್ವಾಣಿ ಬಯಸಿದ್ದರೆ, ಪಕ್ಷದ ಕೆಲವರು ಇದು `ಭ್ರಷ್ಟಾಚಾರ ವಿರೋಧಿ ಯಾತ್ರೆ~ ಆಗಿದ್ದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಈ ರಥಯಾತ್ರೆಯು ಯುಪಿಎ-2 ಸರ್ಕಾರವನ್ನು ಮತ್ತೆ ಮೂಲೆಗುಂಪು ಮಾಡುವುದು ಎಂಬ ವಿಶ್ವಾಸವನ್ನು ಬಿಜೆಪಿ ಹೊಂದಿದೆ.`ಚುನಾವಣೆಗೂ ಈ ಯಾತ್ರೆಗೂ ಸಂಬಂಧವಿಲ್ಲ~ ಎಂದು ಅಡ್ವಾಣಿ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 1990ರಲ್ಲಿ ರಥಯಾತ್ರೆ ಕೈಗೊಂಡಿದ್ದ ಅಡ್ವಾಣಿ ನಂತರದಲ್ಲಿ ಪಕ್ಷದ ಚುನಾವಣೆಯ ಅದೃಷ್ಟವನ್ನು ಬದಲಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.