ನವದೆಹಲಿ (ಪಿಟಿಐ/ಐಎಎನ್ಎಸ್): ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರಿಗೆ ಸಂಕಷ್ಟ ಪರ್ವ ಎದುರಾಗಿದೆ. ‘೨ಜಿ’ ತರಂಗಾಂತರ ಹಾಗೂ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಗಳ ಆರೋಪಿಗಳನ್ನು ಸಿನ್ಹಾ ಅವರು ರಕ್ಷಿಸುತ್ತಿದ್ದಾರೆ ಎನ್ನುವ ಆರೋಪವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಅವರಿಂದ ಸ್ಪಷ್ಟ ಪ್ರತಿಕ್ರಿಯೆಯನ್ನೂ ಕೇಳಿದೆ.
ಸಿಬಿಐ ನಿರ್ದೇಶಕರ ನಿವಾಸದ ಸಂದರ್ಶಕರ ಪಟ್ಟಿಯಲ್ಲಿ ‘೨ಜಿ’ ತರಂಗಾಂತರ ಹಂಚಿಕೆ ಹಗರಣದ ಕಳಂಕಿತರ ಹೆಸರುಗಳು ಇವೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಸೋಮವಾರವಷ್ಟೇ ಸಿನ್ಹಾ ಅವರಿಂದ ಸುಪ್ರೀಂಕೋರ್ಟ್್ ಪ್ರತಿಕ್ರಿಯೆ ಕೇಳಿತ್ತು. ಇದೀಗ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿಯೂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ಸಿನ್ಹಾ ಅವರು ಕಲ್ಲಿದ್ದಲು ಹಗರಣದ ಆರೋಪಿಗಳನ್ನು ಭೇಟಿಯಾಗಿದ್ದರು ಎಂದು ಸರ್ಕಾರೇತರ ಸಂಸ್ಥೆ ‘ಕಾಮನ್ ಕಾಸ್’ ಆರೋಪಿಸಿತ್ತು. ಈ ವಿಷಯವನ್ನು ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸುವಂತೆಯೂ ಅದು ಕೋರ್ಟ್ಗೆ ಮನವಿ ಮಾಡಿಕೊಂಡಿತ್ತು.
ಈ ಸಂಬಂಧ ಹತ್ತು ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯನ್ಯಾಯಮೂರ್ತಿ ಆರ್.ಎಂ. ಲೋಧಾ ಅವರಿದ್ದ ಪೀಠವು ಸಿನ್ಹಾ ಅವರಿಗೆ ಮಂಗಳವಾರ ಸೂಚಿಸಿತು. ಈ ಪ್ರಕರಣದಿಂದ ಸಿನ್ಹಾ ಅವರನ್ನು ದೂರ ಇಡುವಂತೆ ಮಾಡಿಕೊಂಡ ಮನವಿಗೆ ಆದೇಶ ನೀಡಲು ಪೀಠ ನಿರಾಕರಿಸಿತು.
ಅಲ್ಲದೇ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೧೯ಕ್ಕೆ ನಿಗದಿ ಮಾಡಿತು ಸರ್ಕಾರೇತರ ಸಂಸ್ಥೆ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್, ‘ಸೋಮವಾರ ಕೊಟ್ಟಿದ್ದು ‘೨ಜಿ’ಗೆ ಸಂಬಂಧಪಟ್ಟ ಆದೇಶ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಕೂಡ ಸಿನ್ಹಾ ವಿರುದ್ಧ ಆದೇಶ ನೀಡಬಹುದು ಎಂದು ವಾದಿಸಿದರು. ಬಳಿಕ ಪೀಠವು ಸಿನ್ಹಾ ಅವರಿಗೆ ನೋಟಿಸ್ ನೀಡಲು ಒಪ್ಪಿಕೊಂಡಿತು. ಸೆಪ್ಟೆಂಬರ್ ೧೫ರಂದು ೨ಜಿ ವಿಚಾರಣೆ ನಡೆಯಲಿದೆ. ಈ ವಿವಾದದ ಕಾರಣ ರಂಜಿತ್ ಸಿನ್ಹಾ ಅವರು ಸಿಬಿಐ ನಿರ್ದೇಶಕರಾಗಿ ಮುಂದುವರಿಯುವ ಬಗ್ಗೆ ಈಗ ಅನುಮಾನ ಎದ್ದಿದೆ.
ನೇಮಕದಲ್ಲೂ ವಿವಾದ..
ಸಿಬಿಐ ನಿರ್ದೇಶಕರಾಗಿ ರಂಜಿತ್ ಸಿನ್ಹಾ ಅವರನ್ನು ನೇಮಿಸುವಾಗ ಬಿಜೆಪಿ ಅಪಸ್ವರ ಎತ್ತಿತ್ತು. ಈ ಸ್ಥಾನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ ನಿರ್ದೇ ಶಕ ಶರದ್ ಸಿನ್ಹಾ, ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಅತುಲ್ ಅವರ ಹೆಸರನ್ನು ಕೇಂದ್ರ ಜಾಗೃತ ಆಯೋಗ ಶಿಫಾರಸು ಮಾಡಿತ್ತು. ಸೇವಾ ಹಿರಿತನದ ಆಧಾರದಲ್ಲಿ ರಂಜಿತ್ ಸಿನ್ಹಾ ಅವರನ್ನು ನೇಮಕ ಮಾಡಲಾಯಿತು. ಈ ನೇಮಕಾತಿಯಲ್ಲಿ ಸರ್ಕಾರವು ಜಾಗೃತ ಆಯೋಗದ ಶಿಫಾರಸುಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ಮಾಡಿತ್ತು.
ಸಿನ್ಹಾ ಮೇಲಿನ ಆರೋಪಗಳು: ೧೯೯೬ರಲ್ಲಿ ಸಿಬಿಐನಲ್ಲಿ ಡಿಐಜಿ ಆಗಿದ್ದ ಸಂದರ್ಭದಲ್ಲಿ ಸಿನ್ಹಾ ಅವರು ಮೇವು ಹಗರಣದ ಆರೋಪಿ ಲಾಲು ಪ್ರಸಾದ್ ಅವರನ್ನು ರಕ್ಷಿಸಲು ಯತ್ನಿಸಿದ್ದರು ಎನ್ನುವ ಆರೋಪ ಕೂಡ ಇದೆ.
ಸಿಬಿಐ ನಿರ್ದೇಶಕರಾದ ಕೂಡಲೇ ಸಿನ್ಹಾ ಅವರು ಮೇವು ಹಗರಣದ ನಾಲ್ವರು ಪ್ರಮುಖ ತನಿಖಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು. ಆದರೆ ಸುಪ್ರೀಂಕೋರ್ಟ್ ಇದಕ್ಕೆ ತಡೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.