ಭಿಂಡ್ (ಮಧ್ಯಪ್ರದೇಶ) (ಪಿಟಿಐ): ಅಕ್ರಮ ಗಣಿ ಮಾಫಿಯಾಕ್ಕೆ ಯುವ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ಬಲಿಯಾದ ದಿನವೇ ಮತ್ತೊಬ್ಬ ಐಪಿಎಸ್ ಅಧಿಕಾರಿ ಜಯದೇವನ್ ಮೇಲೆ ಅಕ್ರಮ ಮದ್ಯ ಮಾಫಿಯಾದವರ ಜತೆಗೂಡಿ ಬಿಜೆಪಿಯ ಮಾಜಿ ಶಾಸಕ ನರೇಂದ್ರ ಸಿಂಗ್ ಬೆಂಬಲಿಗರು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ಹೋಳಿ ಹುಣ್ಣಿಮೆ ಪ್ರಯುಕ್ತ ಜಿಲ್ಲಾಡಳಿತವು ಮದ್ಯ ಮಾರಾಟ ನಿಷೇಧದ ಆದೇಶ ಹೊರಡಿಸಿತ್ತು. ಆದರೆ ಇಟಾವಾ ಹಾಗೂ ಲಾಹರ್ ರಸ್ತೆಯಲ್ಲಿರುವ ಮದ್ಯದಂಗಡಿಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ನಡೆಯುತ್ತಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಜಯದೇವನ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಮದ್ಯ ಮಾರಾಟ ಕುರಿತು ಪ್ರಶ್ನಿಸಿದ್ದಾರೆ.
ಇದರಿಂದ ಕೆರಳಿದ ಮದ್ಯ ಮಾರಾಟಗಾರರು ಹಾಗೂ ನರೇಂದ್ರ ಸಿಂಗ್ ಬೆಂಬಲಿಗರು ಬಡಿಗೆ ಹಾಗೂ ಕಲ್ಲಿನಿಂದ ಜಯದೇವನ್ ಸೇರಿದಂತೆ ಪೊಲೀಸ್ ತಂಡದ ಮೇಲೆ ದಾಳಿ ಮಾಡಿದರು. ಅಪಾಯದ ಸುಳಿವು ಅರಿತ ಪೊಲೀಸ್ ಸಿಬ್ಬಂದಿ ಅಲ್ಲಿಂದ ಹಿಂದಿರುಗಿ ಬಂದಿದ್ದಾರೆ. ಆದರೆ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನರೇಂದ್ರ ಸಿಂಗ್, ಆತನ ಏಳು ಸದಸ್ಯರು ಹಾಗೂ 18 ಜನ ಅಪರಿಚಿತ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ, ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಘಟನೆ ಬೆನ್ನಲ್ಲೇ ಭಿಂಡ್ ಜಿಲ್ಲಾಧಿಕಾರಿ ಅಖಿಲೇಶ್ ಶ್ರೀವಾಸ್ತವ್ ಅವರು ಮದ್ಯ ಮಾರಾಟ ತಡೆಯುವಲ್ಲಿ ವಿಫಲವಾದ ಜಿಲ್ಲಾ ಅಬಕಾರಿ ಅಧಿಕಾರಿ ಎ.ರಂಗಶಾಹಿ ಅವರಿಗೆ ಷೋಕಾಸ್ ನೋಟಿಸ್ ಜಾರಿಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.