ಪಟ್ನಾ: ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದ ಆರ್ಜೆಡಿ ಮುಖಂಡ ಲಾಲುಪ್ರಸಾದ್ ಅವರು ಶನಿವಾರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕೆಲಗಂಟೆಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ತೆರಳಿದರು.
‘ಮನೆಯಲ್ಲೇ ತಲೆಸುತ್ತಿ ಬಿದ್ದಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತಜ್ಞವೈದ್ಯರು ಪರಿಶೀಲಿಸಿದ ವೇಳೆ, ಮಧುಮೇಹ, ರಕ್ತದೊ
ತ್ತಡ, ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂತು’ ಎಂದು ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನಸಂಸ್ಥೆ (ಐಜಿಐಎಂಎಸ್) ವೈದ್ಯಕೀಯ ಅಧೀಕ್ಷಕ ಮನೀಶ್ ಮಂಡಲ್ ತಿಳಿಸಿದರು.
ಲಾಲು ಆರೋಗ್ಯದ ಕುರಿತು ಮಾತನಾಡಿದ ಅವರ ಕುಟುಂಬ ವೈದ್ಯ ಎಸ್.ಕೆ.ಸಿನ್ಹಾ, ‘ಆಸ್ಪತ್ರೆಯಿಂದ ತೆರಳಿದ ವೇಳೆ, ಅವರ ಆರೋಗ್ಯ ಸ್ಥಿರವಾಗಿತ್ತು. ಕೆಲವರ್ಷಗಳ ಹಿಂದೆ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಮುಂಬೈನ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ತಪಾಸಣೆಗೆ ಒಳಪಡಲಿದ್ದಾರೆ. ನಂತರ ಮೂತ್ರಪಿಂಡದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಲಿದ್ದಾರೆ’ ಎಂದು ತಿಳಿಸಿದರು.
ಲಾಲುಗೆ ನೋಟಿಸ್: ಮಾನಹಾನಿಕರ ಪ್ರಕರಣವೊಂದರದಲ್ಲಿ ಲಾಲು ಅವರಿಗೆ ಇಲ್ಲಿನ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಬಿಹಾರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಉದಯಕಾಂತ್ ಮಿಶ್ರಾ ಅವರು ದೂರು ದಾಖಲಿಸಿದ್ದರು.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಭಾಗಲ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಲಾಲು ಅವರು, ಮಿಶ್ರಾ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಟೀಕೆ ಮಾಡಿದ್ದರು. ಬಹುಕೋಟಿ ಶ್ರೀಜನ್ ಹಗರಣದಲ್ಲಿ ನಿತೀಶ್ ಮತ್ತು ಮಿಶ್ರಾ ಅವರ ಕೈವಾಡ ಇದೆ ಎಂದು ದೂರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.