ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಗರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ದಯಾನಿಧಿ ಮಾರನ್ ನಿರ್ದೋಷಿ ಎಂದು ತಾನು ಹೇಳಿಯೇ ಇಲ್ಲ ಎಂದು ಸಿಬಿಐ ಗುರುವಾರ ಸುಪ್ರೀಂಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ.
ಇದೇ ವೇಳೆ ಈ ಹಗರಣದಲ್ಲಿ ಸಿಬಿಐ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆಪಾದಿಸಿ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ಅರ್ಜಿ ಸಲ್ಲಿಸಿರುವುದಕ್ಕೂ ಸಿಬಿಐ ತೀವ್ರವಾಗಿ ಆಕ್ಷೇಪಿಸಿದೆ.
`ಏರ್ಸೆಲ್ ಕಂಪೆನಿಯು ತನ್ನ ಷೇರುಗಳನ್ನು ಮಲೇಷಿಯಾ ಮೂಲದ ಮ್ಯಾಕ್ಸಿಸ್ ಗ್ರೂಪ್ಗೆ ಮಾರಾಟ ಮಾಡಲು ಮಾರನ್ ಒತ್ತಡ ಹೇರಿದ್ದರೆಂಬುದಕ್ಕೆ ಈತನಕ ಯಾವುದೇ ಸುಳಿವು ಸಿಕ್ಕಿಲ್ಲ ಎಂದಷ್ಟೇ ನಾವು ಹೇಳಿದ್ದೇವೆ~ ಎಂಬುದನ್ನು ಸಿಬಿಐ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರ ನ್ಯಾಯಪೀಠದ ಮುಂದೆ ಸಮರ್ಥಿಸಿಕೊಂಡಿತು.
`ಏರ್ಸೆಲ್ ಷೇರು ಮಾರಾಟ ಮಾಡುವ ಮುನ್ನವೇ ಮ್ಯಾಕ್ಸಿಸ್ ಕಂಪೆನಿಯು ಮಾರನ್ ಮತ್ತು ಅವರ ಸೋದರನೊಂದಿಗೆ ಸಂಪರ್ಕ ಹೊಂದಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ~ ಎಂದೂ ಸಿಬಿಐ ಪರ ವಕೀಲ ಕೆ.ಕೆ.ವೇಣುಗೋಪಾಲ್ ತಿಳಿಸಿದರು.ಹಿಂದಿನ ವಿಚಾರಣೆಯ ಬಗ್ಗೆ ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಮಾರನ್ರನ್ನು ಸಿಬಿಐ ದೋಷಮುಕ್ತಗೊಳಿಸಿದೆ ಎಂಬ ರೀತಿಯಲ್ಲಿ ವರದಿಗಳು ಪ್ರಕಟವಾಗಿವೆ ಎಂದು ದೂರಿದರು.
ಸಿಪಿಐಎಲ್ ಪರ ವಕೀಲ ಪ್ರಶಾಂತ್ ಭೂಷಣ್ ಸಿಬಿಐ ತನಿಖೆ ಪ್ರಾಮಾಣಿಕತೆ ಬಗ್ಗೆ ಹಾಗೂ ಈ ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆಂದು ಅನುಮಾನ ವ್ಯಕ್ತಪಡಿಸಿರುವುದು ತೀವ್ರ ಆಕ್ಷೇಪಾರ್ಹ ಎಂದು ವೇಣುಗೋಪಾಲ್ ವಾದಿಸಿದರು.
ಪ್ರಶಾಂತ್ ಭೂಷಣ್ ಸಿಬಿಐ ಬಗ್ಗೆ ಆರೋಪಗಳ ದುರದೃಷ್ಟಕರ. ಈ ಆರೋಪಗಳನ್ನು ರದ್ದುಗಳಿಸಬೇಕು ಎಂದು ವೇಣುಗೋಪಾಲ್ ಕೋರಿದರು. ಆದರೆ ಸಿಪಿಐಎಲ್ ವಾದವನ್ನೂ ಆಲಿಸದೆ ಹಾಗೆ ರದ್ದತಿ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳ ಸ್ಪಷ್ಟಪಡಿಸಿದರು.
ಮಾರನ್ ಮೇ 2004ರಿಂದ ಮೇ 2007ರವರೆಗೆ ದೂರಸಂಪರ್ಕ ಸಚಿವರಾಗಿದ್ದರು. ಆಗ ಏರ್ಸೆಲ್ ಕಂಪೆನಿ ಮಾಲಿಕರಾಗಿದ್ದ ಶಿವಶಂಕರನ್ ತಮ್ಮ ಹೆಸರಿನಲ್ಲಿ ಹೊಂದಿದ್ದ ಷೇರುಗಳನ್ನು ಮ್ಯಾಕ್ಸಿಮ್ ಕಂಪೆನಿಗೆ ಮಾರಾಟ ಮಾಡಲು ಮಾರನ್ ಒತ್ತಾಯಿಸಿದ್ದರು. ಈ ಮುನ್ನ ಏರ್ಸೆಲ್ ಕಂಪೆನಿಗೆ ಸರ್ಕಾರದ ಒಪ್ಪಿಗೆ ಪತ್ರ ನೀಡಲು ಮಾರನ್ ಬಹಳಷ್ಟು ವಿಳಂಬ ಮಾಡಿದ್ದರು.
ಆದರೆ ಮ್ಯಾಕ್ಸಿಮ್ ಗ್ರೂಪ್ಗೆ ಷೇರು ಮಾರಿದ ಮೇಲೆ ಆ ಕಂಪೆನಿಗೆ ತ್ವರಿತವಾಗಿ ಒಪ್ಪಿಗೆ ಪತ್ರ ನೀಡಿದರು. ಸಚಿವರು ಹೀಗೆ ಅನುಕೂಲ ಮಾಡಿಕೊಟ್ಟದ್ದಕ್ಕೆ ಪ್ರತಿಯಾಗಿ, ಮ್ಯಾಕ್ಸಿಮ್ ಕಂಪೆನಿ ಮಾರನ್ ಕುಟುಂಬದ ವಹಿವಾಟಿನಲ್ಲಿ ಹಣ ತೊಡಗಿಸಿದೆ ಎಂಬ ಆರೋಪ ಇದಾಗಿದೆ.
ಸುಪ್ರೀಂಕೋರ್ಟ್ನಲ್ಲಿ ನಡೆದಿರುವ ವಿಚಾರಣೆ ಸಂದರ್ಭದಲ್ಲಿ, `ಶಿವಶಂಕರನ್ ಅವರಿಗೆ ಒಪ್ಪಿಗೆ ಪತ್ರ ನೀಡುವಲ್ಲಿ ಮಾರನ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ~ ಎಂದೇ ಸಿಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.