ADVERTISEMENT

ಮುಂಬೈ ದಾಳಿಯ ವಿಚಾರಣೆ ತೃಪ್ತಿಕರವಾಗಿರಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ನವದೆಹಲಿ (ಪಿಟಿಐ): ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದ ವಿಚಾರಣೆಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸುವಂತೆ ಈ ವಾರಾಂತ್ಯದಲ್ಲಿ ನಡೆಯಲಿರುವ ವಿಸ್ತೃತ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಕಿಸ್ತಾನವನ್ನು ಭಾರತ ಕೋರಲಿದೆ.

ಇದಲ್ಲದೆ, ಪರಮಾಣು ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಿಶ್ವಾಸ ಮೂಡಿಸುವ ಕ್ರಮಗಳನ್ನು ಸಹ ಉಭಯ ದೇಶಗಳು ಪರಿಶೀಲಿಸಲಿವೆ.

ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ನೇತೃತ್ವದ ಉನ್ನತ ಮಟ್ಟ ಭಾರತೀಯ ನಿಯೋಗವು ಈ ತಿಂಗಳ 24 ಮತ್ತು 25ರಂದು ಇಸ್ಲಾಮಾಬಾದ್‌ನಲ್ಲಿ ಸಲ್ಮಾನ್ ಬಷೀರ್ ನೇತೃತ್ವದ ಪಾಕ್ ನಿಯೋಗದೊಂದಿಗೆ ಮಾತುಕತೆ ನಡೆಸಲಿದೆ.  ಈ ಸಂದರ್ಭದಲ್ಲಿ ಪಾಕ್ ನೆಲದಿಂದ ಭಾರತವನ್ನು ಗುರಿಯಾಗಿಸಿರುವ ಭಯೋತ್ಪದನೆಯ ಪ್ರಸ್ತಾಪವಾಗಲಿದೆ. ಶಾಂತಿ ಮತ್ತು ಭದ್ರತೆ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಹಾಗೂ ಸ್ನೇಹ ವಿನಿಮಯಗಳ ಅಭಿವೃದ್ಧಿ ಮುಂತಾದ ವಿಷಯಗಳು ಚರ್ಚೆಗೆ ಬರಲಿವೆ.

ಭದ್ರತೆ, ವ್ಯಾಪಾರ, ವಾಣಿಜ್ಯ, ನೀರಾವರಿ ಮತ್ತಿತರ ಕ್ಷೇತ್ರಗಳ ಬಗ್ಗೆ ಈವರೆಗೆ ನಡೆದ ದ್ವಿಪಕ್ಷೀಯ ಮಾತುಕತೆಯಿಂದ ಉಭಯತ್ರರ ಮಧ್ಯೆ ಪರಸ್ಪರ ತಿಳಿವಳಿಕೆಗೆ ನೆರವಾಗಿದೆ. ಈಗ ವಾಸ್ತವದ ನಿರೀಕ್ಷೆಯೊಂದಿಗೆ ಮುಕ್ತ ಮತ್ತು ರಚನಾತ್ಮಕ ಮಾತುಕತೆ ನಡೆಯುವ ಭರವಸೆಯನ್ನು ಭಾರತ ಹೊಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.