ನವದೆಹಲಿ (ಪಿಟಿಐ): ಸಿಗ್ನಲ್ ತೊಂದರೆಯಿಂದ ಪದೇಪದೇ ರೈಲು ಅಪಘಾತಗಳು ಸಂಭವಿಸುತ್ತಿದ್ದರೂ ರೈಲ್ವೆ ಇಲಾಖೆ ಯೂರೋಪ್ ಮಾದರಿಯ ಅತ್ಯಾಧುನಿಕ ರೈಲು ಸುರಕ್ಷಾ ಹಾಗೂ ಮುನ್ಸೂಚನಾ ವ್ಯವಸ್ಥೆ (ಟಿಪಿಡಬ್ಲುಎಸ್) ಅಳವಡಿಕೆ ಮುಂದಕ್ಕೆ ಹಾಕುತ್ತಿದೆ.
`ಟಿಪಿಡಬ್ಲುಎಸ್~ ತಂತ್ರಜ್ಞಾನ ಅಳವಡಿಸಿದಾಗ ರೈಲಿನ ಚಾಲಕ ಕೆಂಪು ಸಿಗ್ನಲ್ ಉಲ್ಲಂಘಿಸಿ ಮುಂದೆ ನಡೆದರೂ ರೈಲಿಗೆ ಸ್ವಯಂಚಾಲಿತವಾಗಿ ತುರ್ತು ಬ್ರೇಕ್ ಬೀಳುತ್ತದೆ. ಮುಂದುವರಿದ ದೇಶಗಳಲ್ಲಿ ರೈಲು ಮಾರ್ಗಗಳಲ್ಲಿ ಕಡ್ಡಾಯವಾಗಿ ಈ ವ್ಯವಸ್ಥೆ ಅಳವಡಿಸಲಾಗುತ್ತದೆ.
2012-13ನೇ ಸಾಲಿನಲ್ಲಿ 800 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ `ಟಿಪಿಡಬ್ಲುಎಸ್~ ಅಳವಡಿಸುವ ಪ್ರಸ್ತಾಪ ರೈಲ್ವೆ ಇಲಾಖೆಯ ಮುಂದಿದ್ದರೂ ಅದಕ್ಕಾಗಿ ಈವರೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ. `ಟಿಪಿಡಬ್ಲುಎಸ್~ ಅಳವಡಿಕೆಗೆ ಪ್ರತಿ ಕಿ.ಮೀ.ಗೆ ರೂ 50 ಲಕ್ಷ ವೆಚ್ಚವಾಗುವ ನಿರೀಕ್ಷೆಯಿದೆ.
ಈ ಮೊದಲು ವಲಯ ರೈಲ್ವೆ ಕಚೇರಿಗಳಿಗೆ ಈ ತಂತ್ರಜ್ಞಾನ ಅಳವಡಿಸಲು ಸೂಚಿಸಲಾಗಿತ್ತು. ಆನಂತರ ರೈಲ್ವೆ ಮಂಡಳಿಯಿಂದಲೇ ಟೆಂಡರ್ ಕರೆಯಲು ನಿರ್ಧರಿಸಲಾಯಿತು. ಇದರಿಂದಾಗಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
12ನೇ ಪಂಚವಾರ್ಷಿಕ ಯೋಜನೆಯನ್ವಯ ದೇಶದಾದ್ಯಂತ 3,200 ಕಿ.ಮೀ. ಉದ್ದದ ಮಾರ್ಗದಲ್ಲಿ ರೂ 3,200 ಕೋಟಿ ವೆಚ್ಚದಲ್ಲಿ `ಟಿಪಿಡಬ್ಲುಎಸ್~ ಅಳವಡಿಸಲಾಗುವುದು.
ಲಭ್ಯ ಅಂಕಿ-ಅಂಶಗಳ ಪ್ರಕಾರ 2000ದಿಂದ 2010ರವರೆಗೆ 2,763 ರೈಲ್ವೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಅರ್ಧದಷ್ಟು ರೈಲ್ವೆ ಸಿಬ್ಬಂದಿಯ ಅಜಾಗರೂಕತೆಯಿಂದ ಸಂಭವಿಸಿವೆ.
ಚಾಲಕ ಕೆಂಪು ಸಿಗ್ನಲ್ ಉಲ್ಲಂಘಿಸಿದ್ದೇ ಮಂಗಳವಾರ ಬೆಳಗಿನ ಜಾವ ಪೆನುಕೊಂಡದಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.