ADVERTISEMENT

ಮುಷ್ಕರ ತತ್ ಕ್ಷಣದಿಂದ ಅಂತ್ಯ: ನ್ಯಾಯಾಲಯಕ್ಕೆ ಏರ್ ಇಂಡಿಯಾ ಪೈಲಟ್ ಗಳ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 10:20 IST
Last Updated 3 ಜುಲೈ 2012, 10:20 IST

ನವದೆಹಲಿ (ಪಿಟಿಐ): ತಮ್ಮ 58 ದಿನಗಳ ಮುಷ್ಕರವನ್ನು ತತ್ ಕ್ಷಣದಿಂದಲೇ ಹಿಂತೆಗೆದುಕೊಳ್ಳಲಾಗುವುದು ಎಂದು ಚಳವಳಿ ನಡೆಸುತ್ತಿರುವ ಏರ್ ಇಂಡಿಯಾ ಪೈಲಟ್ ಗಳು ದೆಹಲಿ ಹೈಕೋರ್ಟಿಗೆ ಮಂಗಳವಾರ ತಿಳಿಸಿದ್ದಾರೆ.

 ಸೇವೆಗೆ ಹಾಜರಾತಿ ವರದಿ ಸಲ್ಲಿಸುವ ಮೂಲಕ 48 ಗಂಟೆಗಳ ಒಳಗಾಗಿ ಸೇವೆಗೆ ಮರಳುವುದಾಗಿಯೂ, ಮುಷ್ಕರದ ಅವಧಿಯಲ್ಲಿ ಸೇವೆಯಿಂದ ವಜಾ ಗೊಂಡಿರುವ ಪೈಲಟ್ ಗಳು ಸೇವೆಗೆ ಹಾಜರಾಗಲು ಇಚ್ಛೆ ಇರುವುದಾಗಿ ಮನವಿ ಸಲ್ಲಿಸಿ ಈ ಸಂಬಂಧ ವರದಿ ನೀಡುವುದಾಗಿಯೂ ಪೈಲಟ್ ಗಳು ತಮ್ಮ ವಕೀಲರಾದ ಗೀತಾ ಲೂಥ್ರ ಅವರ ಮೂಲಕ ನ್ಯಾಯಮೂರ್ತಿ ರೇವಾ ಖೇತ್ರಪಾಲ ಅವರಿಗೆ ತಿಳಿಸಿದರು.

ಪೈಲಟ್ ಗಳ ಸಮಸ್ಯೆಗಳನ್ನು ಅನುಕಂಪದಿಂದ ಪರಿಗಣಿಸುವುದಾಗಿ ಏರ್ ಇಂಡಿಯಾ ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ಭರವಸೆ ನೀಡಿದ್ದನ್ನು ಅನುಸರಿಸಿ ಮುಷ್ಕರ ಹಿಂತೆಗೆದುಕೊಳ್ಳಲು ಪೈಲಟ್ ಗಳು ನಿರ್ಧರಿಸಿದರು.

ವಿವಾದ ಇತ್ಯರ್ಥ ಪಡಿಸಲು ವಕೀಲರ ಮೂಲಕ ತೀವ್ರ ಪ್ರಯತ್ನ ನಡೆಸಲಾಯಿತು. ನಂತರ ಉಭಯ ಕಡೆಗಳ ವಕೀಲರೂ ತಮ್ಮ ಕಕ್ಷಿದಾರರು ಈ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.