ADVERTISEMENT

ಮುಸ್ಲಿಂ ಧರ್ಮ ಸ್ವೀಕರಿಸಿದ್ದರಿಂದಲೇ ಇಷ್ಟೆಲ್ಲಾ ಆಯಿತು: ಸುಪ್ರೀಂ ತೀರ್ಪಿನ ಬಳಿಕ ಹಾದಿಯಾ ಮಾತು

ಏಜೆನ್ಸೀಸ್
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಮುಸ್ಲಿಂ ಧರ್ಮ  ಸ್ವೀಕರಿಸಿದ್ದರಿಂದಲೇ ಇಷ್ಟೆಲ್ಲಾ ಆಯಿತು: ಸುಪ್ರೀಂ ತೀರ್ಪಿನ ಬಳಿಕ ಹಾದಿಯಾ ಮಾತು
ಮುಸ್ಲಿಂ ಧರ್ಮ ಸ್ವೀಕರಿಸಿದ್ದರಿಂದಲೇ ಇಷ್ಟೆಲ್ಲಾ ಆಯಿತು: ಸುಪ್ರೀಂ ತೀರ್ಪಿನ ಬಳಿಕ ಹಾದಿಯಾ ಮಾತು   

ಕೋಯಿಕ್ಕೋಡ್‌: ‘ತಮ್ಮ ಗಂಡನ ಜತೆ ಬದುಕಲು ಹಾದಿಯಾಗೆ ಸಂಪೂರ್ಣ ಸ್ವಾತಂತ್ರ್ಯ ಇದೆ’ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿರುವ ಹಾದಿಯಾ(24), ‘ನಾನು ಮುಸ್ಲಿಂ ಧರ್ಮ ಸ್ವೀಕರಿಸಿದ್ದರಿಂದಲೇ ಇಷ್ಟೆಲ್ಲಾ ಆಯಿತು’ ಎಂದಿದ್ದಾರೆ.

‘ಸಂವಿಧಾನವು ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಎಲ್ಲ ಸ್ವಾತಂತ್ರ್ಯವನ್ನೂ ನೀಡಿದೆ. ಅದು ಪ್ರತಿ ಪ್ರಜೆಯ ಮೂಲಭೂತ ಹಕ್ಕಾಗಿದೆ. ಹಾಗಿದ್ದರೂ ಇಷ್ಟೆಲ್ಲಾ ಆಯಿತು’ ಎಂದು ಅವರು ಹೇಳಿದ್ದಾರೆ.

ಶನಿವಾರ ಸೇಲಂ ನಿಂದ ಇಲ್ಲಿಗೆ ಬಂದ ಹಾದಿಯಾ – ಶೆಫಿನ್‌ ದಂಪತಿ, ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಪಕ್ಷದ ಕಚೇರಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ADVERTISEMENT

‘ಸುಪ್ರೀಂಕೋರ್ಟ್‌ ನಮ್ಮ ಮುದುವೆಯನ್ನು ಎತ್ತಿ ಹಿಡಿಯುವುದರೊಂದಿಗೆ ನಮಗೆ ಸ್ವಾತಂತ್ರ್ಯ ಸಿಕ್ಕ ಅನುಭವವಾಗುತ್ತಿದೆ’ ಎಂದಿದ್ದಾರೆ.

ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ಅಖಿಲಾ ಅಶೋಕನ್‌ ಹೆಸರಿನ ಹಿಂದೂ ಯುವತಿ, ತಮ್ಮ ಹೆಸರನ್ನು ಹಾದಿಯಾ ಎಂದು ಬದಲಿಸಿಕೊಂಡಿದ್ದರು. ನಂತರ ಶಫಿನ್‌ ಜಹಾನ್‌ ಎಂಬ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದರು. ಇದನ್ನು ವಿರೋಧಿಸಿದ್ದ ಹಾದಿಯಾ ತಂದೆ, ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಗುಂಪುಗಳು ತಮ್ಮ ಮಗಳನ್ನು ಬಲವಂತವಾಗಿ ಮತಾಂತರಗೊಳಿಸಿವೆ ಎಂದು ಆರೋ‍ಪಿಸಿದ್ದರು.

ಇನ್ನೂ ಮೂರುದಿನಗಳ ಕಾಲ ಕೇರಳದಲ್ಲಿಯೇ ಉಳಿಯುವುದಾಗಿ ಹೇಳಿರುವ ಹಾದಿಯಾ, ‘ನಾವು, ಎರಡು ಮುಸ್ಲಿಂ ಸಂಘಟನೆಗಳ ನೆರವು ಕೇಳಿದ್ದೆವು. ಆದರೆ, ಅವು ನಮಗೆ ಸಹಾಯ ಮಾಡಲು ನಿರಾಕರಿಸಿದ್ದವು. ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಪಿಎಫ್‌ಐ ಮಾತ್ರ ನಮಗೆ ಸಹಕಾರ ನೀಡಿತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.