ADVERTISEMENT

ಮೆಟ್ರೊ ಸಂಚಾರ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 20:00 IST
Last Updated 31 ಮಾರ್ಚ್ 2011, 20:00 IST

ನವದೆಹಲಿ: ಏಪ್ರಿಲ್ ನಾಲ್ಕರ ಯುಗಾದಿ ದಿನದಂದು ಓಡಾಟ ಆರಂಭಿಸಬೇಕಿದ್ದ ‘ನಮ್ಮ ಮೆಟ್ರೊ’ ಉದ್ವಾಟನೆ ಮುಂದಕ್ಕೆ ಹೋಗಿದೆ. ‘ರೈಲ್ವೆ ಸುರಕ್ಷತಾ ಕಮಿಷನರ್’ ಒಳಗೊಂಡಂತೆ ಸಂಬಂಧಪಟ್ಟ ಹಲವು ಸಂಸ್ಥೆಗಳಿಂದ ಇನ್ನೂ ‘ಹಸಿರು ನಿಶಾನೆ’ ದೊರೆಯದ ಹಿನ್ನೆಲೆಯಲ್ಲಿ ಮೆಟ್ರೊ ಸಂಚಾರ ವಿಳಂಬವಾಗಲಿದೆ.

ಮೆಟ್ರೊ ಚಾಲನೆ ವಿಳಂಬ ಕುರಿತು ಕಳೆದ ವಾರ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡು ಆದಷ್ಟು ಶೀಘ್ರವಾಗಿ ಉದ್ಘಾಟನೆ ನೆರವೇರಿಸುವುದಾಗಿ ನಗರಾಭಿವೃದ್ಧಿ ಸಚಿವಾಲಯಕ್ಕೆ ಸ್ಪಷ್ಟಪಡಿಸಿದೆ. ಎಲ್ಲ ಅಗತ್ಯ ಅನುಮೋದನೆ ಪಡೆಯದ ಹೊರತು ತಾವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಕಮಲನಾಥ್ ಹೇಳಿದ್ದಾರೆ.

ಬೆಂಗಳೂರು ಮೆಟ್ರೊ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಾಗಿದ್ದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮಂಡಳಿ ಅಧ್ಯಕ್ಷರಾಗಿದ್ದಾರೆ. ಮೆಟ್ರೊ ಓಡಾಟ ಆರಂಭಕ್ಕೆ ಮೊದಲು ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ರೈಲ್ವೆ ಸುರಕ್ಷತಾ ಕಮಿಷನರ್ ಅನುಮೋದನೆ ಕಡ್ಡಾಯ.

ಇದಲ್ಲದೆ, ಲಖನೌದಲ್ಲಿರುವ ಆರ್‌ಡಿಎಸ್‌ಒ ಸಂಸ್ಥೆಯಿಂದ ‘ಬಿಎಂಆರ್‌ಸಿಎಲ್’ ಪ್ರಮಾಣೀಕೃತ ದಾಖಲೆ ಪಡೆಯಬೇಕಾಗಿದೆ. ಇದು ಸೂಚನಾ ಫಲಕ, ದೂರ ಸಂಪರ್ಕ ಹಾಗೂ ಹಳಿಒಳಗೊಂಡಂತೆ ಎಲ್ಲ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಪ್ರಮಾಣೀಕರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.