ADVERTISEMENT

ಮೆದುಳಿನ ಉರಿಯೂತ ಪರೀಕ್ಷೆ: ಆಧುನಿಕ ಕಿಟ್ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ನವದೆಹಲಿ: ಉತ್ತರ ಪ್ರದೇಶದ ಗೋರಕ್‌ಪುರದ ನಿಗೂಢ ಮಿದುಳಿನ ಉರಿಯೂತ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಆರೋಗ್ಯ ಇಲಾಖೆಯು ಬೆಂಗಳೂರು ಮೂಲದ ವಿಜ್ಞಾನಿಗಳ ನೆರವು ಕೋರಿದೆ.

ಕಳೆದ ಏಳು ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಮೆದುಳಿನ ಉರಿಯೂತ ರೋಗದ ಸಮಸ್ಯೆ ಉಲ್ಬಣಗೊಂಡಿದ್ದರೂ ಸಮಸ್ಯೆಯ ಮೂಲ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಗೋರಕ್‌ಪುರದಲ್ಲಿ ಸುಮಾರು ಮೂರು ಸಾವಿರ ಮಕ್ಕಳು ಈ ರೋಗಕ್ಕೆ ತುತ್ತಾಗಿದ್ದು, 400 ಮಕ್ಕಳು ಇದುವರೆಗೆ ಸತ್ತಿದ್ದಾರೆ. ಈ ಸಮಸ್ಯೆಗೆ ಕಾರಣ  ಕಂಡುಹಿಡಿಯಲು ವೈದ್ಯರಿಂದ ಸಾಧ್ಯವಾಗಿಲ್ಲ. ಆದರೆ ಅವರು ಮೆದುಳಿನ ಉರಿಯೂತ ಲಕ್ಷಣಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮಾದರಿಗಳನ್ನು ಬೆಂಗಳೂರು ಮೂಲದ ವಿಜ್ಞಾನಿಗಳಾದ ವಿ.ರವಿ ಅವರ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ರಾಷ್ಟ್ರೀಯ ಸಂಸ್ಥೆಗೆ ಕಳುಹಿಸಲು ನಿರ್ಧರಿಸಿದೆ.

ವಿ.ರವಿ ಅವರು ಜಿಗ್ಟನ್ ಡಯಾಗ್ನಸ್ಟಿಕ್ ಸಂಸ್ಥೆಯ ಬಿ.ವಿ.ರವಿ ಕುಮಾರ್ ಅವರ ಜತೆ ಸೇರಿಕೊಂಡು ಮೆದುಳಿನ ಉರಿಯೂತ ರೋಗದ ಕಾರಣ ಪತ್ತೆಯ ಕಿಟ್ ಒಂದನ್ನು ಸಿದ್ಧಪಡಿಸಿದ್ದಾರೆ. `ಈ ಕಿಟ್‌ನಲ್ಲಿ ಉರಿಯೂತ ರೋಗಕ್ಕೆ ಕಾರಣವಾಗುವ 22 ನಮೂನೆಯ ವೈರಸ್‌ಗಳನ್ನು ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಸ್ಯಾಂಪಲ್ ಒಂದು ವಾರದಲ್ಲಿ ಬರುವ ನಿರೀಕ್ಷೆ ಇದ್ದು, ಅದನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ~ ಎಂದು ರವಿ ತಿಳಿಸಿದ್ದಾರೆ.

2005ರಲ್ಲಿ ಶೇ 64ರಷ್ಟಿದ್ದ ಉರಿಯೂತ ರೋಗ ಪ್ರಕರಣಗಳು 2011ರಲ್ಲಿ ಶೇ 90ಕ್ಕೆ ಏರಿ ಭಾರಿ ಆತಂಕ ಹುಟ್ಟಿಸಿವೆ. ವೈರಸ್‌ಗೆ ಸಂಬಂಧಿಸಿದಂತೆ, ಪುಣೆಯಲ್ಲಿರುವ ಸಂಸ್ಥೆಯ ಪರೀಕ್ಷೆಯ ಪ್ರಕಾರ ಬಹುತೇಕ ಪ್ರಕರಣಗಳು ಕಲುಷಿತ ನೀರು ಬಳಕೆಯಿಂದ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.