ಬಿಜ್ನೊರ್, ಉತ್ತರ ಪ್ರದೇಶ(ಪಿಟಿಐ): ಅಣ್ಣಾ ತಂಡದ ಉಚ್ಚಾಟಿತ ಸದಸ್ಯ ಮುಫ್ತಿ ಶಮೀಮ್ ಕಜ್ಮಿ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಮಂಗಳವಾರ ಟೀಕಿಸಿದ್ದಾರೆ.
`ಅಣ್ಣಾ ತಂಡದ ಸಭೆಯ ನಡಾವಳಿಗಳನ್ನು ರಹಸ್ಯವಾಗಿ ಮೊಬೈಲ್ನಲ್ಲಿ ಧ್ವನಿಮುದ್ರಣ ಮಾಡಿಕೊಂಡ ಆರೋಪದ ಮೇರೆಗೆ ನನ್ನನ್ನು ಉಚ್ಚಾಟಿಸಲಾಗಿದೆ. ಆದರೆ, ಮೊಬೈಲ್ ಫೋನ್ ಕಾರ್ಯನಿರ್ವಹಣೆಯೇ ನನಗೆ ಗೊತ್ತಿಲ್ಲ, ಹೀಗಿರುವಾಗ ಸಭೆಯ ನಡಾವಳಿಗಳನ್ನು ಧ್ವನಿಮುದ್ರಿಸಿಕೊಳ್ಳುವುದು ಹೇಗೆ~ ಎಂದು ಅವರು ಪ್ರಶ್ನಿಸಿದ್ದಾರೆ.
`ಭ್ರಷ್ಟಾಚಾರ ವಿರುದ್ಧದ ಆಂದೋಲನದ ಹೆಸರಿನಲ್ಲಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನಾನು ಅಣ್ಣಾ ಹಜಾರೆ ಅವರಿಗೆ ಹತ್ತಿರವಾಗಿರುವುದು, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ನಡೆಸಿದ ಸಭೆ ಮತ್ತು ನನ್ನ ಜನಪ್ರಿಯತೆಯನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ನನ್ನ ವಿರುದ್ಧ ಸುಳ್ಳು ಸೃಷ್ಟಿ ಮಾಡಿದ್ದಾರೆ~ ಎಂದು ದೂರಿದ್ದಾರೆ.
ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಶನ್ (ಪಿಸಿಆರ್ಎಫ್) ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿದ್ದು, ಆ ಮೂಲಕ ಲೋಕಪಾಲ ಚಳವಳಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹರಿಹಾಯ್ದಿದ್ದಾರೆ.
ಅಣ್ಣಾ ತಂಡದ ಸದಸ್ಯರು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಪಾಲ್ಗೊಂಡಿರುವುದು ಮತ್ತು ದೇಣಿಗೆ ಹಣದ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅಣ್ಣಾ ಅವರು ಪ್ರಮುಖರ ಸಭೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕಜ್ಮಿ ಹೇಳಿದ್ದಾರೆ.
ಸ್ವಾಮಿ ಅಗ್ನಿವೇಶ್ ಮತ್ತು ಕಜ್ಮಿ ಅಂಥವರು ರಾಜಕೀಯ ಹಿತಾಸಕ್ತಿ ಈಡೇರಿಸಿಕೊಳ್ಳಲು ಭ್ರಷ್ಟಾಚಾರ ವಿರುದ್ಧದ ಆಂದೋಲನ ದುರ್ಬಲ ಮಾಡಲು ಹೊರಟಿದ್ದರು ಎಂದು ಅಣ್ಣಾ ತಂಡದ ಮನಿಷ್ ಸಿಸೊಡಿಯಾ ಪ್ರತ್ಯಾರೋಪ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.