ಲಖನೌ (ಪಿಟಿಐ): ಚುನಾವಣೆಯನ್ನು ಕೋಮುವಾದದ ಮೇಲೆ ಎದುರಿಸಲು ಬಿಜೆಪಿ ಮತ್ತು ಎಸ್ಪಿ ಪೈಪೋಟಿ ನಡೆಸಿದ್ದು, ಬೇಕೆಂದೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಬೇನಿ ಪ್ರಸಾದ್ ವರ್ಮ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಚುನಾವಣಾ ಆಯೋಗವು ಸ್ವಯಂ ಪ್ರೇರಣೆಯಿಂದ ಈ ಅಂಶವನ್ನು ಗಣನೆಗೆ ತೆಗೆದುಕೊಂಡು, ಬಿಜೆಪಿ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ಉತ್ತರಪ್ರದೇಶದಲ್ಲಿ ನಡೆಸುತ್ತಿರುವ ಪ್ರಚಾರದ ಮೇಲೆ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದರು.
ಮುಜಫ್ಫರ್ನಗರ ಕೋಮು ಗಲಭೆಯಲ್ಲಿ ಬಿಜೆಪಿ ಮತ್ತು ಎಸ್ಪಿಯ ನೇರ ಕೈವಾಡವಿದ್ದು, ಅಯೋಧ್ಯೆಯಲ್ಲಿ ‘೮೪ ಕೋಸಿ ಪರಿಕ್ರಮ’ ವಿಫಲವಾದ ನಂತರ ಇವೆರಡೂ ಪಕ್ಷಗಳು ಮುಜಫ್ಫರ್ನಗರಗಲಭೆ ಯೋಜಿಸಿದವು. ಈ ಮೂಲಕ ಚುನಾವಣೆಯನ್ನು ಕೋಮುವಾದೀಕರಣ ಮಾಡಲು ಹೊರಟಿವೆ ಎಂದು ಅವರು ಆಪಾದಿಸಿದರು.
೨೦೦೨ರ ಗುಜರಾತ್ ಕೋಮು ಗಲಭೆಯನ್ನು ಪ್ರಸ್ತಾಪಿಸಿದ ಅವರು, ಇದರಲ್ಲಿ ಮೋದಿ ನಿರಪರಾಧಿ ಆಗಲು ಹೇಗೆ ಸಾಧ್ಯ? ಸುಪ್ರೀಂಕೋರ್ಟ್ ಮೇಲೆ ಪ್ರಭಾವ ಬೀರಲು ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಆದರೆ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಅವರು ಹೇಳಿದರು.
ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಇನ್ನೊಬ್ಬ ಆರೋಪಿ ಅಮಿತ್ ಷಾ ಅವರನ್ನು ಗಂಭೀರ ಆರೋಪಗಳಿದ್ದರೂ ಉತ್ತರಪ್ರದೇಶ ಬಿಜೆಪಿ ಉಸ್ತುವಾರಿಯಾಗಿ ನೇಮಿಸಿರುವುದು ಚುನಾವಣೆ-ಯನ್ನು ಕೋಮುವಾದೀಕರಣಗೊಳಿಸಲು ಎಂದು ಅವರು ಟೀಕಿಸಿದರು.
ಬಿಜೆಪಿಗೆ ಬಹುಮತ ನೀಡಿರುವ ಚುನಾವಣಾ ಸಮೀಕ್ಷೆಗಳನ್ನು ನಿರ್ಲಕ್ಷಿಸುವಂತೆ ಜನತೆಗೆ ಕರೆಯಿತ್ತ ಅವರು, ಕಾಂಗ್ರೆಸ್ ಮಾತ್ರ ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸುವುದು ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.