ಜಮ್ಮು (ಪಿಟಿಐ): ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ಕಲಂ ಅಗತ್ಯತೆ ಕುರಿತು ಸಂಸತ್ತಿ ನಲ್ಲಿ ಚರ್ಚೆ ನಡೆಯಬೇಕು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. ಈ ಕಲಂನ ಕುರಿತು ಆಡಳಿತ ಪಕ್ಷ ‘ಸ್ಪಷ್ಟತೆ’ ಹೊಂದಿದೆ. ಈ ಕುರಿತು ಮೊದಲು ಸಂಘ ಪರಿವಾರದೊಂದಿಗೆ ಚರ್ಚೆ ನಡೆಸಿ ಎಂದು ಮೋದಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಮೋದಿ ಹೇಳಿಕೆಯನ್ನು ಗಂಭೀರ ವಾಗಿ ಪರಿಗಣಿಸಬೇಕಿಲ್ಲ. ಮೋದಿಗೆ ‘ಇತಿಹಾಸದ ಬಗ್ಗೆ ಅರಿವಿಲ್ಲ’ ಮತ್ತು ಅನೇಕ ವಿಷಯಗಳ ಬಗ್ಗೆ ‘ಸುಳ್ಳು ಮಾತನಾಡುತ್ತಿದ್ದಾರೆ’ ಎಂದು ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಬಿಜೆಪಿ ಟೀಕೆ: ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರುದ್ಧ ರಾಜ್ಯ ಬಿಜೆಪಿ ಘಟಕ ಹರಿಹಾಯ್ದಿದೆ. ಕಲಂ 370ರ ಬಗ್ಗೆ ಬಿಜೆಪಿ ನಾಯಕ ರೊಂದಿಗೆ ಚರ್ಚೆ ಏರ್ಪಡಿಸುವಂತೆ ಸವಾಲು ಹಾಕಿದೆ. ‘ಈ ಕುರಿತು ಬಿಜೆಪಿ ನಾಯಕ ರೊಂದಿಗೆ ಚರ್ಚೆ ಏರ್ಪಡಿಸಲು ಒಮರ್ ಅಬ್ದುಲ್ಲಾ ಮುಂದೆ ಬರಬೇಕು’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಜುಗಲ್ ಕಿಶೋರ್ ಶರ್ಮಾ ಸೋಮ ವಾರ ಸುದ್ದಿಗಾರರಿಗೆ ತಿಳಿಸಿದರು.
ಪಿಡಿಪಿ ಟೀಕೆ
ಜಮ್ಮು /ಪಟ್ನಾ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಜ್ಞಾನ ಕಡಿಮೆ. ಅದಕ್ಕೇ ಅವರು ಸಂವಿಧಾನದ 370ನೇ ಕಲಂ ಕುರಿತು ಚರ್ಚೆ ನಡೆಯಬೇಕು ಎಂಬ ಹೇಳಿಕೆ ನೀಡುತ್ತಾರೆ ಎಂದು ಪಿಡಿಪಿ ಮುಖ್ಯಸ್ಥ ಮುಫ್ತಿ ಮಹಮ್ಮದ್ ಸಯೀದ್ ತಿರುಗೇಟು ನೀಡಿದ್ದಾರೆ.
‘ಇಂತಹ ಹೇಳಿಕೆಯಿಂದ ಜಮ್ಮು ಕಾಶ್ಮೀರ ಇಬ್ಭಾಗ ಆಗುವ ಸಾಧ್ಯತೆ ಇದೆ. ಮೋದಿ ಅವರ ಕಾನೂನು ಅಜ್ಞಾನಕ್ಕೆ ತಮಗೆ ಮರುಕವಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಅವರು ಹೇಳಿದ್ದಾರೆ. ಇನ್ನೊಂದೆಡೆ 370ನೇ ಕಲಂ ಕುರಿತು ಚರ್ಚೆ ಆಗಬೇಕು ಎಂದು ಹೇಳಿಕೆ ನೀಡಿದ ನರೇಂದ್ರ ಮೋದಿ ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಿಡಿ ಕಾರಿದ್ದಾರೆ. ಇದು ದೇಶ ವಿಭಜನೆಯ ಗೆರೆ ಎಳೆಯುವ ಪ್ರಯತ್ನ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.