ನವದೆಹಲಿ(ಪಿಟಿಐ): ಬಿಜೆಪಿ ಗುಜರಾತ್ನ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಪಕ್ಷದ `ಪ್ರಧಾನಿ ಅಭ್ಯರ್ಥಿ' ಎಂದು ಘೋಷಿಸಿದ ಕ್ರಮವನ್ನು ವಿರೋಧಿಸಿದ್ದ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಶನಿವಾರ ಪಕ್ಷದ ಹಿರಿಯ ನಾಯಕಿ ಸುಷ್ಮಾಸ್ವರಾಜ್ ಹಾಗೂ ಅನಂತ್ಕುಮಾರ್, ಬಲಬೀರ ಪೂಂಜ್ ಭೇಟಿ ಮಾಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.
ಪಕ್ಷದ ಸಂಸದೀಯ ಮಂಡಳಿಯು ಅಡ್ವಾಣಿ ಅವರ ವಿರೋಧ ಬದಿಗೊತ್ತಿ ಮೋದಿ ಅವರ ಹೆಸರನ್ನು ಘೊಷಣೆ ಮಾಡಿದ ನಂತರ, ಈ ಬಗ್ಗೆ ತೀವ್ರ ಅಸಮಾಧಾನಗೊಂಡ ಅಡ್ವಾಣಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರಿಗೆ ಖಾರವಾಗಿ ಪತ್ರ ಬರೆದು ಅವರ ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮೋದಿ ಆಯ್ಕೆ ಬಗ್ಗೆ ಇನ್ನೂ ಅಸಮಾಧಾನದಿಂದಲೇ ಕುದಿಯುತ್ತಿರುವ ಅಡ್ವಾಣಿ ಜೊತೆಗೆ ಸ್ವರಾಜ್ ಮತ್ತು ಪೂಂಜ್ ವಿಷಯವನ್ನು ಚರ್ಚಿಸಿದರು.
ಮಾತುಕತೆಯ ಬಳಿಕ ಅಡ್ವಾಣಿ ನಿಲುವಿನ ಬಗ್ಗೆ ಪ್ರಶ್ನಿಸಿದಾಗ ಸುಷ್ಮಾ ಸ್ವರಾಜ್ ಅವರು 'ಯಾರೂ ತಲೆ ಕೆಡಿಸಿಕೊಂಡಿಲ್ಲ' ಎಂದು ಉತ್ತರಿಸಿದರು. ಅಡ್ವಾಣಿ ಅವರ ಪತ್ರದ ಬಗ್ಗೆ ಚರ್ಚಿಸಲಾಯಿತೆಂಬುದನ್ನು ಅವರು ನಿರಾಕರಿಸಿದರು.
ಅಡ್ವಾಣಿ ಅವರು ತಮ್ಮ ಖಾರವಾದ ಪತ್ರದಲ್ಲಿ ರಾಜನಾಥ ಸಿಂಗ್ ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದರೂ ಗುಜರಾತ್ ಮುಖ್ಯಮಂತ್ರಿ ಬಗ್ಗೆ ಸೊಲ್ಲೆತ್ತಿಲ್ಲ ಎಂಬುದು ಕುತೂಹಲಕಾರಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.