ADVERTISEMENT

ಯುಎಪಿಎ ಕಾಯ್ದೆಗೆ ತಿದ್ದುಪಡಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ):  ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಅಕ್ರಮ ಚಟುವಟಿಕೆ ನಿರ್ಬಂಧ ಕಾಯ್ದೆಗೆ (ಯುಎಪಿಎ) ತಿದ್ದುಪಡಿ ತರುವ ಸಾಧ್ಯತೆ ಇದೆ.

`ಪ್ರಸ್ತುತ ಯುಎಪಿಎ ಕಾಯ್ದೆಯಲ್ಲಿ ಉದ್ದೇಶಪೂರ್ವಕ ಬದಲಾವಣೆ ಮಾಡಲಾಗುತ್ತಿದೆ. ಜಾಗತಿಕ ಹಣಕಾಸು ಕಾರ್ಯಪಡೆ ಶಿಫಾರಸಿನ ಆಧಾರದಲ್ಲಿ ಇದರಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಲಾಗುತ್ತದೆ~ ಎಂದು ಗೃಹ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿ ಯು.ಕೆ.ಬನ್ಸಾಲ್ ಇಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಕ್ರಮ ಹಣಕಾಸು ನೆರವು ತಡೆಗೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಬಲವರ್ಧನೆಯೂ ಇದರಲ್ಲಿ ಅಡಕವಾಗಿದೆ. ಅಲ್ಲದೆ ಸಿಬಿಡಿಟಿ ಮುಖ್ಯಸ್ಥರ ಮುಂದಾಳತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಿರಂತರ ದಾಳಿ ಪ್ರಯತ್ನ...
ಪಾಕಿಸ್ತಾನವು ಅಸಂಖ್ಯ ಮಾರ್ಗದಲ್ಲಿ ಭಾರತದ ಮೇಲೆ ದಾಳಿಗೆ ಪ್ರಯತ್ನಿಸುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆಗಳು ಆಕ್ರಮಣಕ್ಕೆ ಈಡಾಗುವ ಭೀತಿಯಲ್ಲಿವೆ ಎಂದು ಬನ್ಸಾಲ್ ಹೇಳಿದ್ದಾರೆ.

ಜಿಹಾದಿ ಮಾದರಿಯ ಭಯೋತ್ಪಾದನೆಗೆ ಮುಖ್ಯವಾಗಿ ಪಶ್ಚಿಮದ ನಮ್ಮ ನೆರೆ ರಾಷ್ಟ್ರವು ನೆರವು ನೀಡುತ್ತಿದೆ. ಎಲ್ಲ ರೀತಿಯಲ್ಲೂ ಭಾರತದ ಮೇಲೆ ಯುದ್ಧ ಸಾರುವುದೇ ಈ ದೇಶದ ನೀತಿಯಾಗಿದೆ ಎಂದು `ಭಾರತದ ಮೂಲಸೌಕರ್ಯ ಹಾಗೂ ಆರ್ಥಿಕತೆಗೆ ಭಯೋತ್ಪಾದನೆ ತಂದೊಡ್ಡಿರುವ ಸವಾಲುಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಆತಂಕ ವ್ಯಕ್ತಪಡಿಸಿದರು.

ತರಬೇತಿಗೆ ನಿವೃತ್ತ ಸೇನಾ ಸಿಬ್ಬಂದಿ
ನಕ್ಸಲೀಯರ ದಾಳಿ ನಿಯಂತ್ರಣಕ್ಕೆ ಸಿಆರ್‌ಪಿಎಫ್ ಹಾಗೂ ಬಿಎಸ್‌ಎಫ್‌ನಂಥ ಅರೆಸೇನಾ ಪಡೆಗಳಿಗೆ ತರಬೇತಿ ನೀಡಲು ನಿವೃತ್ತ ಸೇನಾ ಸಿಬ್ಬಂದಿಯನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಬನ್ಸಾಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.