ADVERTISEMENT

ರಕ್ಷಣಾ ನೆಲೆಗಳ ಭದ್ರತೆ ಪರಾಮರ್ಶೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 19:38 IST
Last Updated 21 ಜನವರಿ 2016, 19:38 IST
ಗಣರಾಜ್ಯೋತ್ಸವ ಕವಾಯತಿನಲ್ಲಿ ಭಾಗವಹಿಸಲು ಬಂದಿರುವ ಎನ್‌ಸಿಸಿ ಕೆಡೆಟ್ ಶಿಬಿರಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್  – ಪಿಟಿಐ ಚಿತ್ರ
ಗಣರಾಜ್ಯೋತ್ಸವ ಕವಾಯತಿನಲ್ಲಿ ಭಾಗವಹಿಸಲು ಬಂದಿರುವ ಎನ್‌ಸಿಸಿ ಕೆಡೆಟ್ ಶಿಬಿರಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ – ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಪಠಾಣ್‌ ಕೋಟ್ ವಾಯು ನೆಲೆಯ ಮೇಲೆ ಭಯೋತ್ಪಾ ದಕರು ಇತ್ತೀಚೆಗೆ ದಾಳಿ ನಡೆಸಿರುವು ದರಿಂದ ರಕ್ಷಣಾ ನೆಲೆಗಳಿಗೆ ಇರುವ ಅಪಾಯದ ಭದ್ರತಾ ಪರಾಮರ್ಶೆ ನಡೆಸಲು ಸರ್ಕಾರ ಸಮಿತಿಯನ್ನು ರಚಿಸಿದೆ.

ಇದಲ್ಲದೆ, ಎಲ್ಲಾ ವಿಭಾಗದ ಕಮಾಂಡಿಂಗ್ ಅಧಿಕಾರಿಗಳಿಗೆ ರಕ್ಷಣಾ ನೆಲೆಗಳ ತಪಾಸಣೆ ನಡೆಸಿ ನಿರ್ಲಕ್ಷ್ಯ ಕಂಡುಬಂದರೆ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.

ಗಣರಾಜ್ಯೋತ್ಸವ ಕವಾಯತಿನಲ್ಲಿ ಭಾಗವಹಿಸಲು ಬಂದಿರುವ ಎನ್‌ಸಿಸಿ ಕೆಡೆಟ್ ಶಿಬಿರಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಸಮಿತಿ ರಚನೆಯ ಅಧಿಸೂಚನೆ ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ ಎಂದು ಅವರು ಹೇಳಿದರು. ಒಂದು ವಾರದಲ್ಲಿ ಹೊಸ ಸಮಿತಿಯು ಎಲ್ಲಾ ರಕ್ಷಣಾ ನೆಲೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಪರಾಮರ್ಶೆ ನಡೆಸಲಿದೆ. ಸಮಿತಿಯು ಸ್ಥಳೀಯ ಕಮಾಂಡಿಂಗ್ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದೆ ಎಂದು ಸಚಿವರು ತಿಳಿಸಿದರು.

ಎಲ್ಲಾ ರಕ್ಷಣಾ ಸ್ಥಾವರಗಳು ಮತ್ತು ನೆಲೆಗಳ ಮುಖ್ಯಸ್ಥರು ಭದ್ರತಾ ಬೆದರಿಕೆಯ ತಪಾಸಣೆ ನಡೆಸಿ, ಲೋಪದೋಷ ಕಂಡುಬಂದರೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಪರಿಕ್ಕರ್ ಹೇಳಿದರು. ಭದ್ರತಾ ವ್ಯವಸ್ಥೆಯ ಪರಾಮರ್ಶೆಗೆ ಸಮಿತಿ ನೇಮಕ ಮಾಡಿರುವುದರಿಂದ ಈಗ ನಡೆಯುತ್ತಿರುವ ಎನ್‌ಐಎ ತನಿಖೆಗೆ ಏನೂ ಅಡ್ಡಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎನ್‌ಐಎ ತನ್ನ ಪಾಡಿಗೆ ತನಿಖೆ ಮುಕ್ತಾಯಗೊಳಿಸಲಿ. ಸಮಿತಿ ಭದ್ರತೆಯ ವಿಶ್ಲೇಷಣೆ ನಡೆಸುತ್ತದೆ ಎಂದು ತಿಳಿಸಿದರು. ಪಠಾಣ್‌ಕೋಟ್‌ ಘಟನೆಯ ನಂತರ ನೀವು (ಪರಿಕ್ಕರ್) ತಾಳ್ಮೆ ಕಳೆದುಕೊಂ ಡಂತಿದೆ ಎಂದು ಹೇಳಿದಾಗ, ಭದ್ರತೆಯ ಬಗ್ಗೆ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ಸಾರ್ವತ್ರಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ವಿವಿ ದಾಳಿಗೆ ಖಂಡನೆ: ಪಾಕಿಸ್ತಾನದ ವಿಶ್ವವಿದ್ಯಾಲಯದ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯನ್ನು ಸಚಿವರು ಖಂಡಿಸಿದರು. ನಾಗರಿಕರ ಮೇಲೆ ನಡೆಯುವ ಯಾವುದೇ ದಾಳಿ ಅಥವಾ ಹಿಂಸೆಯನ್ನು  ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು. ಬಹ್ರೇನ್‌ನಲ್ಲಿ ನಡೆಯುವ ಏರ್ ಷೋದಿಂದ ಹಿಂದೆ ಸರಿಯುವ ಪಾಕಿಸ್ತಾನದ ನಿರ್ಧಾರವನ್ನು ಪರಿಕ್ಕರ್ ಟೀಕಿಸಿದರು.

ಎಸ್ಪಿ ಸಲ್ವಿಂದರ್ ಸಿಂಗ್ ಮನೆ, ಕಚೇರಿ ಶೋಧ
ನವದೆಹಲಿ/ಅಮೃತಸರ (ಪಿಟಿಐ): ಪಂಜಾಬ್‌ನ ಪಠಣ್‌ಕೋಟ್‌ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು ಎನ್ನಲಾದ ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮನೆ ಮತ್ತು ಕಚೇರಿ ಸೇರಿದಂತೆ ಆರು ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ಗುರುವಾರ ಶೋಧ ನಡೆಸಿದ್ದಾರೆ.

ಸಲ್ವಿಂದರ್ ಸಿಂಗ್ ಅವರ ಅಮೃತಸರ, ಗುರುದಾಸಪುರ ನಿವಾಸ ಮತ್ತು ಕಚೇರಿ, ಅವರ ಸ್ನೇಹಿತರಾದ ಆಭರಣ ವ್ಯಾಪಾರಿ ರಾಜೇಶ್‌ ವರ್ಮ, ಬಾಣಸಿಗ ಮದನ್ ಗೋಪಾಲ್ ಹಾಗೂ ಗೆಳತಿ ಮನೆಗಳಲ್ಲೂ ತಪಾಸಣೆ ಮತ್ತು ಶೋಧ ನಡೆಸಲಾಗಿದೆ.

ಎನ್ಐಎ ಅಧಿಕಾರಿಗಳು ಈಗಾಗಲೇ ಸಲ್ವಿಂದರ್ ಸಿಂಗ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದಲ್ಲದೆ, ಸಿಂಗ್ ಅವರ ನಡವಳಿಕೆ ಮತ್ತು ಮಂಪರು ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಶೀಘ್ರವೇ ಸಿಂಗ್ ಅವರನ್ನು ವಿಧಿ ವಿಜ್ಞಾನಿಗಳ ತಂಡದ ಎದುರು ಹಾಜರುಪಡಿಸಲಾಗುತ್ತದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT