ಜೈಪುರ್ (ಪಿಟಿಐ): ಅಂತೂ ಅನಿಶ್ಚಿತತೆಗೆ ತೆರೆ ಬಿದ್ದಿದೆ. ನಿಗದಿಯಾದಂತೆ ಸಲ್ಮಾನ್ ರಶ್ದಿ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ವಿಡಿಯೊ ಸಂವಾದ ನಡೆಯಲಿದೆ.
ರಾಜಸ್ಥಾನ ಸರ್ಕಾರವು, ಇಲ್ಲಿನ ಜೈಪುರ ಸಾಹಿತ್ಯ ಉತ್ಸವದಿಂದ ದೂರ ಉಳಿದಿದ್ದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ವಿಡಿಯೊ ಮೂಲಕ ಸಂವಾದ ನಡೆಸಲು ತನ್ನ ಆಕ್ಷೇಪವೆನೂ ಇಲ್ಲವೆಂದಿದೆ ಎಂದು ಉತ್ಸವದ ಸಂಘಟಕರು ತಿಳಿಸಿದ್ದಾರೆ.
ವಿಡಿಯೊ ಸಂವಾದ ನಡೆಸಲು ಪೂರ್ವಾನುಮತಿಯ ಅಗತ್ಯವಿಲ್ಲವೆಂಬ ಮಾಹಿತಿ ಲಭಿಸಿದ್ದು. ಉತ್ಸವದ ಕೊನೆಯ ದಿನವಾದ ಇಂದು ಮಧ್ಯಾಹ್ನ (ಮಂಗಳವಾರ) ನಿಗದಿಯಾದಂತೆ ರಶ್ದಿ ಅವರೊಂದಿಗೆ ವಿಡಿಯೊ ಸಂವಾದ ನಡೆಯುವುದೆಂದು ಉತ್ಸವದ ಸಂಘಟಕ ಸಂಜಯ್ ರಾಯ್ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾರ್ಯಕ್ರಮ ಪಟ್ಟಿಯಂತೆಯೇ ಭಾರತೀಯ ಸಂಜಾತ ಸಲ್ಮಾನ್ ರಶ್ದಿ ಅವರ ~ ಮಿಡ್ ನೈಟ್ಸ್ ಚಿಲ್ಡ್ರನ್~ ಕೃತಿಯ ಕುರಿತು ಮಧ್ಯಾಹ್ನ 3.45ಕ್ಕೆ ಸಂವಾದ ನಡೆಯಲಿದೆ. ಲೇಖಕ ರಶ್ದಿ ಅವರು ತಮ್ಮ ಬಾಲ್ಯ, ಹಿಂದೆ ಅನುಭವಿಸಿದ ತೊಂದರೆಗಳು ಮತ್ತು ಕೃತಿಯನ್ನು ಸಿನಿಮಾಕ್ಕೆ ಅಳವಡಿಸುವ ಬಗ್ಗೆ ಸಭಿಕರೊಂದಿಗೆ ಒಂದು ಗಂಟೆ ಕಾಲ ವಿಡಿಯೊ ಸಂವಾದ ನಡೆಸಲಿದ್ದಾರೆ.
ಜೀವ ಭಯದ ಹಿನ್ನೆಲೆಯಲ್ಲಿ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕಿ ತಮ್ಮ ಭಾರತದ ಪ್ರವಾಸವನ್ನು ಕೈ ಬಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.