ADVERTISEMENT

ರಶ್ದಿ ವಿಡಿಯೊ ಸಂವಾದ ರದ್ದು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಜೈಪುರ (ಪಿಟಿಐ):  ಹಿಂಸಾಚಾರ ನಡೆಯುವ ಭೀತಿಯ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಸಾಹಿತ್ಯ ಉತ್ಸವದಲ್ಲಿ ನಡೆಯಬೇಕಿದ್ದ ಸಲ್ಮಾನ್ ರಶ್ದಿ ಅವರ ವಿಡಿಯೊ ಸಂವಾದವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯಿತು.
ಮುಸ್ಲಿಂ ಸಂಘಟನೆಗಳು ಅವರ ವಿಡಿಯೊ ಸಂವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

`ಅಪರಾಧಿ ಬರಹಗಾರ~ನ ಸಂವಾದಕ್ಕೆ ಅವಕಾಶ ಕಲ್ಪಿಸ್ದ್ದಿದೇ ಆದಲ್ಲಿ ರಕ್ತಪಾತ ನಡೆಯುತ್ತದೆ ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು ಮತ್ತು ಲೇಖಕನ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರ ಒತ್ತಡ ಹೆಚ್ಚಿದ್ದರಿಂದ ಕಾರ್ಯಕ್ರಮದ ಆಯೋಜಕರು ಅನಿವಾರ್ಯವಾಗಿ ವಿಡಿಯೊ ಸಂವಾದವನ್ನು ರದ್ದುಪಡಿಸುವ ತೀರ್ಮಾನಕ್ಕೆ ಬರಬೇಕಾಯಿತು.

`ಅಡ್ಡಿ ಉಂಟು ಮಾಡಲೆಂದೇ ಕೆಲವರು ಕಾರ್ಯಕ್ರಮ ನಡೆಯುವ ಸ್ಥಳದ ಒಳಗೆ ಪ್ರವೇಶಿಸಿದ್ದು, ಹಿಂಸಾಚಾರ ಉಂಟಾಗಬಹುದೆಂದು ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸುವ ನಿರ್ಧಾರಕ್ಕೆ ಬರಲಾಯಿತು~ ಎಂದು ಆಯೋಜಕರಲ್ಲಿ ಒಬ್ಬರಾದ ಸಂಜಯ್ ರಾಯ್ ತಿಳಿಸಿದರು.

`ಕೆಲವು ಸಂಘಟನೆಗಳು ತೀವ್ರ ಬೆದರಿಕೆ ಒಡ್ಡಿದ್ದವು. ಅಲ್ಲದೇ ಆಗಬಹುದಾಗಿದ್ದ ಹಿಂಸಾಚಾರವನ್ನು ತಡೆಗಟ್ಟುವುದು ಅನಿವಾರ್ಯವಾಗಿತ್ತು. ನಿಜಕ್ಕೂ ಇದೊಂದು ದುರದೃಷ್ಟಕರ  ಮತ್ತು ಮೂರ್ಖತನದ ಪರಿಸ್ಥಿತಿ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ~ ಎಂದು ರಾಯ್ ಮಾರ್ಮಿಕವಾಗಿ ನುಡಿದರು.

`ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು. ಯಾವುದೇ ತರಹದ ಅಹಿತಕರ ಘಟನೆ ನಡೆದು ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಅನಿವಾರ್ಯವಾಗಿ ತಲೆಬಾಗಬೇಕಾಯಿತು~ ಎಂದರು.

ಇದಕ್ಕೂ ಮುನ್ನ ಸಹಾಯಕ ಪೊಲೀಸ್ ಕಮೀಷನರ್ ವಿರೇಂದ್ರ ಝಾಲಾ ಅವರು, ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಮಾಲೀಕರು ವಿಡಿಯೊ ಸಂವಾದಕ್ಕೆ ಅವಕಾಶ ಕಲ್ಪಿಸಿದರೆ ತೀವ್ರ ಪರಿಣಾಮವಾಗಬಹುದೆಂಬ ಭೀತಿಯಿಂದ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳ್ದ್ದಿದಾಗಿ ತಿಳಿಸಿದರು.

ಸಂಘಟಕರ ಜತೆ ಸಭೆ ನಡೆಸಿದ ಬಳಿಕ ಪ್ರತಿಭಟನಾಕಾರರು ಸ್ಥಳದಲ್ಲಿಯೇ ಪ್ರಾರ್ಥನೆ ಮಾಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.