ರಾಳೇಗಣ ಸಿದ್ಧಿ (ಪಿಟಿಐ): ಯಾವುದೇ ಕಾರಣಕ್ಕೂ ನಾನು ರಾಜಕೀಯ ಪ್ರವೇಶಿಸುವುದಿಲ್ಲ~ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಸ್ಪಷ್ಟಪಡಿಸಿದ್ದಾರೆ.
`ಭ್ರಷ್ಟಾಚಾರ ವಿರುದ್ಧದ ನನ್ನ ಹೋರಾಟ ಸಂಪೂರ್ಣವಾಗಿ ರಾಜಕೀಯದಿಂದ ದೂರವಿರುವಂತೆ ವಿಶೇಷ ನಿಗಾ ವಹಿಸಿದ್ದೇನೆ. ನಮ್ಮ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ~ ಎಂದು ಅವರು ಖಾಸಗಿ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಜನ ಲೋಕಪಾಲ್ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಸಂಸದರ ವಿರುದ್ಧ ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಅಣ್ಣಾ ತಂಡ ಜನರಿಗೆ ಕರೆ ನೀಡಿದ್ದು, ಇದು ರಾಜಕೀಯ ಪ್ರವೇಶಿಸುವ ಸಂಕೇತವೇ ಎಂದು ಕೇಳಿದ ಪ್ರಶ್ನೆಗೆ ಅಣ್ಣಾ ಹಜಾರೆ ಅವರು ಮೇಲಿನಂತೆ ಉತ್ತರಿಸಿದ್ದಾರೆ.
ಭ್ರಷ್ಟಾಚಾರವನ್ನು ಬುಡಮಟ್ಟದಿಂದ ಕಿತ್ತೊಗೆಯುವ ಉದ್ದೇಶದಿಂದ ಯಾತ್ರೆ ನಡೆಸಲಾಗುತ್ತಿದ್ದರೆ ಜನ ಲೋಕಪಾಲ್ ಮಸೂದೆ ಜಾರಿಗಾಗಿ ಆಡಳಿತ ಪಕ್ಷವನ್ನು ಏಕೆ ವಿರೋಧಿಸುತ್ತಿಲ್ಲ ಎಂದು ಅಣ್ಣಾ ಹಜಾರೆ ಅವರು, ಭ್ರಷ್ಟಾಚಾರದ ವಿರುದ್ಧ ಲಾಲ್ಕೃಷ್ಣ ಅಡ್ವಾಣಿ ಅವರು ನಡೆಸಲು ಉದ್ದೇಶಿಸಿರುವ ಯಾತ್ರೆ ಕುರಿತ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.