ಪಟ್ನಾ (ಐಎಎನ್ಎಸ್): ಬಿಹಾರವು 2014ರ ಲೋಕಸಭಾ ಚುನಾವಣೆಗೂ ಮುನ್ನ ವಿಶೇಷ ದರ್ಜೆಯ ಸ್ಥಾನಮಾನ ಪಡೆಯುವ ಸಾಧ್ಯತೆ ಕಡಿಮೆ ಇದ್ದರೂ, ರಘುರಾಂ ರಾಜನ್ ಸಮಿತಿಯು ರಾಜ್ಯವನ್ನು ‘ಅತ್ಯಂತ ಹಿಂದುಳಿದ ಪ್ರದೇಶ’ವೆಂದು ಗುರುತಿಸಿರುವುದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸದ್ಯಕ್ಕೆ ತಮ್ಮ ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸಿದ ಹುಮ್ಮಸ್ಸಿನಲ್ಲಿದ್ದಾರೆ.
ಹಿಂದುಳಿದಿರುವಿಕೆ ಗುರುತಿಸುವ ಹೊಸ ಮಾನದಂಡದಡಿ ಬಿಹಾರಕ್ಕೆ ವಿಶೇಷ ದರ್ಜೆಯ ಸ್ಥಾನಮಾನ ಸಿಗದಿದ್ದರೂ, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣಕಾಸು ನೆರವು ಪಡೆಯಬಹುದು ಎಂಬುದು ನಿತೀಶ್ ಸಂತಸಕ್ಕೆ ಮುಖ್ಯ ಕಾರಣ.
‘ಹೊಸ ಮಾನದಂಡವು ಬಿಹಾರಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ಅನುಕೂಲವಾಗುತ್ತದೆ’ ಎಂದು ನಿತೀಶ ವಿಶ್ವಾಸದಿಂದ ನುಡಿದಿದ್ದಾರೆ. ‘ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಹಣ ಪಡೆಯಲು ನಾವು ಈಗ ಶಕ್ತಿಮೀರಿ ಕೆಲಸ ಮಾಡುತ್ತೇವೆ. ಇದು ವಿಶೇಷ ದರ್ಜೆ ಸ್ಥಾನಮಾನ ಬೇಡಿಕೆಯ ಹಿಂದಿರುವ ಪ್ರಮುಖ ತಂತ್ರ’ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರ ವಿಷಯ: ಸಂಯುಕ್ತ ಜನತಾದಳ (ಜೆಡಿಯು) ಪಕ್ಷವು ಈ ತಂತ್ರವನ್ನು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮುಖ್ಯ ಪ್ರಚಾರ ಸಾಧನವಾಗಿ ಬಳಸಲಿದೆ ಎಂದೂ ಅವರು ಸುಳಿವು ನೀಡಿದ್ದಾರೆ. ‘ಈ ತಂತ್ರವು ದೇಶದ ರಾಜಕೀಯ ದಿಕ್ಕನ್ನು ಬದಲಿಸಲಿದೆ. ರಾಜಕೀಯ ಈಗ ಅಭಿವೃದ್ಧಿಯ ಸುತ್ತ ತಿರುಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಬಿಹಾರದ ವಿಜಯ: ಸಮಿತಿಯ ವರದಿಯನ್ನು ‘ಬಿಹಾರದ ವಿಜಯ’ವೆಂದು ನಿತೀಶ್ ಬಣ್ಣಿಸಿದ ನಂತರ, ರಾಜ್ಯದ ಜೆಡಿಯು ನಾಯಕರು ಮತ್ತು ಕಾರ್ಯಕರ್ತರು ಸಿಹಿಗಳನ್ನು ವಿತರಿಸಿ, ಬಣ್ಣ ಎರಚುವುದರಿಂದ ಹಿಡಿದು ಡ್ರಮ್ಗಳನ್ನು ಬಾರಿಸುವ ತನಕ ಸಂಭ್ರಮಾಚರಣೆ ಮಾಡಿದ್ದಾರೆ. ವಿಶೇಷ ಸ್ಥಾನಮಾನ ಬೇಡಿಕೆಯನ್ನು ಅಣಕಿಸುತ್ತಿದ್ದ ತಮ್ಮ ವಿರೋಧಿಗಳಿಗೆ ಉತ್ತರಿಸಿರುವ ನಿತೀಶ್, ‘ಸಮಿತಿಯ ವರದಿ ನಕಾರಾತ್ಮಕ ರಾಜಕೀಯ ಮಾಡುವವರಿಗೆ ತಕ್ಕ ಉತ್ತರ ನೀಡಿದೆ’ ಎಂದಿದ್ದಾರೆ.
ಲಾಲೂ, ಮೋದಿ ಟೀಕೆ: ‘ನಿತೀಶ್ ವಿಶೇಷ ಸ್ಥಾನಮಾನದ ಹೆಸರಿನಲ್ಲಿ ಜನರನು್ನ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆರ್ಜೆಡಿ ನಾಯಕ ಲಾಲು ಪ್ರಸಾದ್ ಆರೋಪಿಸಿದರೆ, ‘ಸಮಿತಿಯ ವರದಿ ಚಿಕ್ಕ ಬೆಟ್ಟವೊಂದರಿಂದ ಪರ್ವತವನ್ನೇ ನಿರ್ಮಿಸಿದಂತಿದೆ’ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಟೀಕಿಸಿದ್ದಾರೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮೊದಲು ಪ್ರಸ್ತಾಪಿಸಿದು್ದ 2000ರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಬ್ಡಿದೇವಿ. ಅವರಾಗಲಿ ಅಥವಾ ಆರ್ಜೆಡಿ ಪಕ್ಷವಾಗಲೀ ನಿತೀಶ್ ಅವರಂತೆ, ಈ ಬೇಡಿಕೆಯನ್ನು ಅಭಿವೃದ್ಧಿಯ ವಿಷಯವಾಗಿ ಪಟ್ಟು ಹಿಡಿದಿರಲಿಲ್ಲ. ನಿತೀಶ್ ಈ ಬೇಡಿಕೆಯನ್ನು ಆಗಾಗ ಪುನರುಚ್ಚರಿಸುತ್ತಿದ್ದರಲ್ಲದೇ, ಅಧಿಕಾರದಲ್ಲಿದ್ದ ಐದು ವರ್ಷ ಕಾಲವೂ ನಿರಂತರ ಪ್ರಚಾರ ಕೈಗೊಂಡರು.
ಮಾನವ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಬಿಹಾರ ರಾಷ್ಟ್ರೀಯ ಸರಾಸರಿಗಿಂತ ಬಹಳ ಹಿಂದೆ ಬಿದ್ದಿರುವ ಆಧಾರದಲ್ಲಿಯೇ ಅವರು ವಾದ ಮಂಡಿಸಿದ್ದರು. ಬಿಹಾರದ ತಲಾ ಆದಾಯ, ಬಂಡವಾಳ ಹೂಡಿಕೆ ಹಾಗೂ ವಿದ್ಯುಚ್ಛಕ್ತಿ ಬಳಕೆ ದೇಶದಲ್ಲೇ ಅತ್ಯಂತ ಕಡಿಮೆ ಮತ್ತು ಎಲ್ಲ ಮಾನವ ಸಂಪನ್ಮೂಲ ಅಂಕಿಅಂಶಗಳಲ್ಲೂ ಹಿಂದುಳಿದಿರುವುದನ್ನು ನಿತೀಶ್ ಪ್ರಸ್ತಾಪಿಸಿದ್ದರು.
ರಾಜ್ಯಕ್ಕೆ ವಿಶೇಷ ದರ್ಜೆ ಸ್ಥಾನಮಾನ ನೀಡದಿದ್ದರೆ, ಆರ್ಥಿಕ ಬೆಳವಣಿಗೆಯ ರಾಷ್ಟ್ರೀಯ ಸರಾಸರಿ ಮುಟ್ಟಲು ಇನ್ನೂ ಕನಿಷ್ಠ 25 ವರ್ಷಗಳು ಬೇಕೆಂದು ನಿತೀಶ್ ಪ್ರತಿಪಾದಿಸಿದ್ದರು. ಕೇಂದ್ರದ ಮೇಲೆ ಒತ್ತಡ ಹೇರಲು ಕಳೆದ ವರ್ಷ ಪಟ್ನಾದಲ್ಲಿ ಮತ್ತು ಈ ವರ್ಷ ದೆಹಲಿಯಲ್ಲಿ ಜೆಡಿಯು ರಾ್ಯಲಿ ನಡೆಸಿ, ಈ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿತ್ತು. ಈ ಸಂಬಂಧ ಪಕ್ಷ ಸುಮಾರು ಒಂದು ಲಕ್ಷ ಸಹಿ ಸಂಗ್ರಹ ಮಾಡಿತು್ತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.