ADVERTISEMENT

ರಾಜಾ ಮತ್ತೆರಡು ದಿನ ಸಿಬಿಐ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST


ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಗರಣದ ಆರೋಪಿಯಾದ ಮಾಜಿ ದೂರ ಸಂಪರ್ಕ ಸಚಿವ ಎ. ರಾಜಾ ಅವರನ್ನು ಇನ್ನೆರಡು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲು ವಿಶೇಷ ನ್ಯಾಯಾಲಯ ಮಂಗಳವಾರ ಒಪ್ಪಿಗೆ ನೀಡಿದೆ.

ಹಗರಣಕ್ಕೆ ಸಂಬಂಧಿ ಸಿದಂತೆ ಉಪ ಯುಕ್ತ ಮಾಹಿತಿಯನ್ನು ರಾಜಾ ಅವರು ನೀಡುತ್ತಿಲ್ಲ. ಹಾಗಾಗಿ ವಿಚಾರಣೆಗೆ ಮತ್ತಷ್ಟು ಕಾಲಾವಕಾಶ ಬೇಕು ಎಂಬ ಸಿಬಿಐ ಮನವಿಯನ್ನು ನ್ಯಾಯಾಧೀಶ  ಒ.ಪಿ.ಸೈನಿ ಪುರಸ್ಕರಿಸಿದರು. ರಾಜಾ ಫೆ.10ರವರೆಗೆ ಸಿಬಿಐ ವಶದಲ್ಲಿ ಇರಲಿದ್ದಾರೆ.

ಆದರೆ ಹಗರಣದ ಮತ್ತಿಬ್ಬರು ಆರೋಪಿಗಳಾದ ದೂರಸಂಪರ್ಕ ಇಲಾಖೆಯ ನಿವೃತ್ತ ಕಾರ್ಯದರ್ಶಿ ಸಿದ್ಧಾರ್ಥ ಬೇಹೂರ ಮತ್ತು ರಾಜಾ ಅವರ ಮಾಜಿ ಆಪ್ತ ಸಹಾಯಕ ಆರ್.ಕೆ. ಚಂದೋ ಲಿಯಾ ಅವರನ್ನು  ಇನ್ನಷ್ಟು ವಿಚಾರಣೆಗೆ ಒಳಪಡಿಸುವು ಅಗತ್ಯವಿಲ್ಲವೆಂದು ಸಿಬಿಐ ಹೇಳಿದ ಹಿನ್ನೆಲೆಯಲ್ಲಿ, ಈ ಇಬ್ಬರನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು.

2 ಜಿ ಹಗರಣದಲ್ಲಿ ಈ ಮೂವರ ಶಾಮೀಲಿನಿಂದಾಗಿ 22,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೇಂದ್ರ ಜಾಗೃತ ಆಯುಕ್ತರು ಅಂದಾಜು ವರದಿ ನೀಡಿದ್ದ ಹಿನ್ನೆಲೆಯಲ್ಲಿ ಈ ಮೂವರನ್ನು ಫೆ.2ರಂದು ಬಂಧಿಸಲಾಗಿತ್ತು.
ಸಿಬಿಐ ನಿಗಾ
2 ಜಿ ಅವ್ಯವಹಾರದ ಜಾಡು ಭೇದಿಸುವ ನಿಟ್ಟಿನಲ್ಲಿ ಆರ್ಥಿಕ ಗುಪ್ತದಳ ವಿಭಾಗ ಹಾಗೂ ಆದಾಯ ತೆರಿಗೆ ಇಲಾಖೆಗಳು ಕಲೆಹಾಕಿರುವ ಮಾಹಿತಿಗಳ ಮೇಲೆ ಸಿಬಿಐ ಇದೀಗ ಹೆಚ್ಚಿನ ಗಮನ ಹರಿಸಿದೆ.

ADVERTISEMENT

2 ಜಿ ತರಂಗಾಂತರ ಮಂಜೂರಾತಿ ಪಡೆದ ಕೆಲವು ಕಂಪೆನಿಗಳು ನಡೆಸಿರುವ ಹಣಕಾಸು ವ್ಯವಹಾರದ ಬಗ್ಗೆ ತಂತ್ರಜ್ಞಾನ ಇಲಾಖೆ ಸಿಬಿಐಗೆ ಕೆಲವು ಮಹತ್ವದ ಮಾಹಿತಿ ಒದಗಿಸಿದೆ ಎನ್ನಲಾಗಿದೆ.
ಮುಂಬೈ ಮೂಲದ ಕೆಲವು ಸಂಸ್ಥೆಗಳು ದೂರವಾಣಿ ಕಂಪೆನಿಗಳಿಗೆ ವರ್ಗಾಯಿಸಿರುವ ನಿಧಿಯ ಬಗ್ಗೆ ಕೂಡ ಸಿಬಿಐ ನಿಗಾ ವಹಿಸಿದೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.