ADVERTISEMENT

ರಾಜೀನಾಮೆಗೆ ಪಟ್ಟು, ಮಧ್ಯಾಹ್ನಕ್ಕೆ ಮುಂದೂಡಿದ ಸಂಸತ್ತು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 8:35 IST
Last Updated 17 ಮಾರ್ಚ್ 2011, 8:35 IST

 ನವದೆಹಲಿ, (ಪಿಟಿಐ): ಮನಮೋಹನ್  ಸಿಂಗ್ ಅವರ ಸರ್ಕಾರ ಅವಿಶ್ವಾಸ ಗೊತ್ತುವಳಿಯ ಪ್ರಹಾರದಿಂದ  ಪಾರಾಗಲು 2008ರಲ್ಲಿ ಕೆಲವು ಸಂಸದರಿಗೆ ಹಣ ನೀಡಲಾಗಿತ್ತು ಎಂಬ ಪತ್ರಿಕೆಗಳಲ್ಲಿ ಪ್ರಕಟವಾದ ವಿಕಿಲೀಕ್ಸ್ ಮಾಹಿತಿ ಆಧರಿಸಿ ವಿರೋಧ ಪಕ್ಷಗಳ ಸದಸ್ಯರು ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿದಾಗ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಎರಡೂ ಸದನಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದ ಪ್ರಸಂಗ ಗುರುವಾರ ನಡೆದಿದೆ.

ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಿದಾಗ ಕೇಂದ್ರ ಸರ್ಕಾರವನ್ನು ಉಳಿಸಲು ಸಂಸದರಿಗೆ ಹಣ ನೀಡಲಾಗಿತ್ತು ಎಂದು ವಿಕಿಲೀಕ್ಸ್ ಮಾಹಿತಿ ಬಹಿರಂಗಗೊಳಿಸಿದೆ. ಆದ್ದರಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜೀನಾಮೆ ಕೊಡಬೇಕೆಂದು ವಿರೋಧಪಕ್ಷಗಳು  ಸಂಸತ್ತಿನ ಎರಡೂ ಸದನಗಳಲ್ಲಿ ಗುರುವಾರ ಒತ್ತಾಯಿಸಿದವು.

ಲೋಕಸಭೆ ಆರಂಭವಾಗುತ್ತಿದ್ದಂತೆಯೇ ~ಅಮೆರಿಕದೊಂದಿಗಿನ ಅಣು ಒಪ್ಪಂದದ ಸಂದರ್ಭದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ಸರ್ಕಾರವನ್ನು ಬೆಂಬಲಿಸಲು ಸಂಸದರಿಗೆ ಹಣದ ಆಮಿಷ  ಒಡ್ಡಲಾಗಿತ್ತು ಎಂಬುದನ್ನು ವಿಕಿಲೀಕ್ಸ್ ಮಾಹಿತಿ ಬಹಿರಂಗಗೊಳಿಸಿದೆ ಎಂದು ಸಿಪಿಐನ ನಾಯಕ ದಾಸಗುಪ್ತಾ ಅವರು ಪ್ರಸ್ತಾಪಿಸಿದರು. ಈ ಆರೋಪವನ್ನು ಪ್ರಧಾನಿ ನಿರಾಕರಿಸದಿದ್ದರೆ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದರು.

ADVERTISEMENT

ಅವರೊಂದಿಗೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು, ~ಪ್ರಾಮಾಣಿಕ ಪ್ರಧಾನಿ ಎಂದು ಕರೆಯಿಸಿಕೊಳ್ಳುವ ಪ್ರಧಾನಿಯ ಮೂಗಿನಡಿಯೇ ಈ ಪ್ರಕರಣ ನಡೆದಿದೆ. ಮಾಧ್ಯಮಗಳಲ್ಲಿನ ಈ ವರದಿ ದೇಶದ ಪ್ರಜಾಪ್ರಭುತ್ವಕ್ಕೆ ಹತ್ತಿದ್ದ ಕಳಂಕವನ್ನು ಬಯಲಿಗೆಳೆದಿದೆ. ಹಿಂದೆ ಬಿಜೆಪಿ ಸಂಸದರು ತಮಗೆ ನೀಡಿದ್ದ ಹಣವನ್ನು ಸಂಸತ್ತಿನಲ್ಲೇ ಪ್ರದರ್ಶಿಸಿದಾಗ, ಅಂದಿನ ಸಭಾಧ್ಯಕ್ಷರು ಅದನ್ನು ಗಂಭೀರವಾಗಿ ಪರಿಗಣಿಸದೇ ಬಿಜೆಪಿ ಸಂಸದರ ವಿರುದ್ಧವೇ ತನಿಖೆಗೆ ಆದೇಶಿಸಿದ್ದರು ಎಂದರು.

ಅತ್ತ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅರುಣ್ ಜೈಟ್ಲಿ ಅವರು, ಸಂಸದರಿಗೆ ಹಣದ ಆಮಿಷ ಒಡ್ಡಿದ ಈ ಪ್ರಕರಣದಿಂದಲೇ  ಪ್ರಸಕ್ತ ಯುಪಿಎ ಸರ್ಕಾರ  ಅಧಿಕಾರಲ್ಲಿ ಉಳಿಯಿತು. ಅದೂ ನೈತಿಕ ಪಾಪದ ಫಲದಿಂದ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.