ಹೈದರಾಬಾದ್: ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣದ ಕಾಂಗ್ರೆಸ್ ಮುಖಂಡರು ಹಾಕುತ್ತಿರುವ ಒತ್ತಡವನ್ನು ತಡೆಯುವುದಕ್ಕಾಗಿ ಅಖಂಡ `ಆಂಧ್ರಪ್ರದೇಶ'ದ ಪರವಾಗಿ ಕಡಪಾದಲ್ಲಿ ವಿವಿಧ ಪಕ್ಷಗಳ ಮುಖಂಡರು ತಮ್ಮ ಯತ್ನ ಆರಂಭಿಸಿದ್ದಾರೆ. ಆರಂಭಿಕ ಯತ್ನವಾಗಿ ಐವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಮೈಕ್ಯಾಂಧ್ರ ಜೆಎಸಿ, ಕಡಪಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಹಲವು ಕಾಂಗ್ರೆಸ್, ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಮೂವರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ನ ಆದಿನಾರಾಯಣ ರೆಡ್ಡಿ, ವೈಎಸ್ಆರ್ಸಿಯ ಶ್ರೀಕಾಂತ್ ರೆಡ್ಡಿ ಮತ್ತು ಶ್ರೀನಿವಾಸಲು, ವೈಎಸ್ಆರ್ಸಿಯ ವಿಧಾನಪರಿಷತ್ ಸದಸ್ಯರಾದ ನಾರಾಯಣ ರೆಡ್ಡಿ ಮತ್ತು ಪುಲ್ಲಯ್ಯ ಅವರು ಸಭೆಯಲ್ಲಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಶಾಸಕರು ರಾಜೀನಾಮೆ ಪತ್ರಗಳನ್ನು ಸ್ಪೀಕರ್ಗೆ ಬರೆಯುವ ಮಾದರಿಯಲ್ಲಿ ಬರೆದಿದ್ದು, ಸಮೈಕ್ಯಾಂಧ್ರ ಜೆಎಸಿ ಸಂಚಾಲಕ ಚಂದ್ರಶೇಖರ ರೆಡ್ಡಿ ಅವರಿಗೆ ಸಲ್ಲಿಸಿದ್ದಾರೆ.
ಅಖಂಡ ರಾಜ್ಯವನ್ನು ಉಳಿಸುವುದಕ್ಕಾಗಿ ತಮ್ಮ ಸ್ಥಾನ ತ್ಯಾಗಮಾಡಲು ಸಿದ್ಧವಿರುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಹಲವು ಮುಖಂಡರು ಹೇಳಿದ್ದಾರೆ.
ಏಕೀಕೃತ ರಾಜ್ಯಕ್ಕಾಗಿ ಚಳವಳಿ ಆರಂಭಿಸುವ ನಿರ್ಧಾರವನ್ನು ಸಭೆ ಕೈಗೊಂಡಿದೆ. ರಾಜ್ಯದಲ್ಲಿ, ದೆಹಲಿ ಮತ್ತು ಸೋನಿಯಾ ಗಾಂಧಿ ನಿವಾಸದ ಮುಂದೆ ಚಳವಳಿ ನಡೆಸುವ ನಿರ್ಧಾರವನ್ನೂ ಸಭೆ ತೆಗೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.