ADVERTISEMENT

ರಾಜ್ಯಪಾಲರ ಜತೆ ಸಂವಹನಕ್ಕೆ ವಿಧಾನ ಅಗತ್ಯ: ‘ಸುಪ್ರೀಂ’ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2016, 3:54 IST
Last Updated 29 ಜನವರಿ 2016, 3:54 IST
ರಾಜ್ಯಪಾಲರ ಜತೆ ಸಂವಹನಕ್ಕೆ ವಿಧಾನ ಅಗತ್ಯ: ‘ಸುಪ್ರೀಂ’ ಸಲಹೆ
ರಾಜ್ಯಪಾಲರ ಜತೆ ಸಂವಹನಕ್ಕೆ ವಿಧಾನ ಅಗತ್ಯ: ‘ಸುಪ್ರೀಂ’ ಸಲಹೆ   

ನವದೆಹಲಿ (ಪಿಟಿಐ): ರಾಜ್ಯಪಾಲರಂತಹ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರ ಜತೆ ಯಾವ ರೀತಿ ಸಂವಹನ ನಡೆಸಬೇಕು ಎಂಬ ಬಗ್ಗೆ ಮಾರ್ಗಸೂಚಿಯನ್ನು ರೂಪಿಸಿಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಸರ್ಕಾರ ಬದಲಾದ ಕೂಡಲೇ ರಾಜ್ಯಪಾಲರನ್ನು ವಜಾ ಮಾಡಿರುವ ವಿಚಾರ ಗಂಭೀರವಾದುದು ಎಂದು ಹೇಳಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರವು ಹಿಂದಿನ ಯುಪಿಎ ಸರ್ಕಾರ ನೇಮಕ ಮಾಡಿದ್ದ ಉತ್ತರಾಖಂಡ ಮತ್ತು ಪುದುಚೇರಿ ರಾಜ್ಯಪಾಲರನ್ನು ವಜಾ ಮಾಡಿತು. ಉತ್ತಾರಾಖಂಡ ಮತ್ತು ಪುದುಚೇರಿಯ ಮಾಜಿ ರಾಜ್ಯಪಾಲರುಗಳಾದ ಅಜೀಜ್ ಖುರೇಶಿ ಮತ್ತು ವೀರೇಂದ್ರ ಕಟಾರಿಯಾ ಅವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ನೇತೃತ್ವದ ಐವರು ನ್ಯಾಯ ಮೂರ್ತಿಗಳ ಸಂವಿಧಾನ ಪೀಠವು ವಿಚಾರಣೆ ನಡೆಸುತ್ತಿದೆ.

ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿರುವ ನ್ಯಾಯಪೀಠವು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಮಾರ್ಚ್ 28ಕ್ಕೆ ನಿಗದಿಪಡಿಸಿದೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರಾಜೀನಾಮೆ ನೀಡುವಂತೆ ಗೃಹ ಸಚಿವರು ಸೂಚಿಸಿದರು.

ಸೂಚನೆ ಪಾಲಿಸದೆ ಇದ್ದರೆ ವಜಾ ಮಾಡುವ ಬೆದರಿಕೆ ಹಾಕಿದರು ಎಂದು ಅಜೀಜ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೇ ರೀತಿ ಪುದುಚೇರಿ ರಾಜ್ಯಪಾಲರನ್ನೂ ವಜಾ ಮಾಡಲಾಗಿತ್ತು. ಇದೊಂದು ಗಂಭೀರ ವಿಚಾರ ಎಂದು  ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.