ನವದೆಹಲಿ (ಪಿಟಿಐ): ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನಾಯಕರಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಆಯ್ಕೆಯಾದರು.
ಲೋಕಸಭಾ ಚುನಾವಣೆ ನಂತರ ಸೋಮವಾರ ಆರಂಭವಾದ ಮೇಲ್ಮನೆ ಕಲಾಪದ ಮೊದಲ ದಿನ ಅಧ್ಯಕ್ಷ ಹಮೀದ್ ಅನ್ಸಾರಿ, ಇಬ್ಬರೂ ನಾಯಕರ ಆಯ್ಕೆಯನ್ನು ಘೋಷಿಸಿದರು. 61 ವರ್ಷದ ಜೇಟ್ಲಿ ಗುಜರಾತ್ನಿಂದ ಹಾಗೂ 65 ವರ್ಷದ ಆಜಾದ್ ಜಮ್ಮು ಮತ್ತು ಕಾಶ್ಮೀರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಜೇಟ್ಲಿ ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ಆಜಾದ್ ಆರೋಗ್ಯ ಸಚಿವರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಇಬ್ಬರೂ ಪರಾಭವಗೊಂಡಿದ್ದರು.
ರಾಜ್ಯಸಭೆಗೆ ಆಯ್ಕೆಯಾದ ಇಪ್ಪತ್ತೈದು ಹೊಸ ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಬಹುತೇಕ ಸದಸ್ಯರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮತ್ತೆ ಕೆಲವರು ತಮ್ಮ ಮಾತೃಭಾಷೆಯಾದ ಬಂಗಾಳಿ, ಗುಜರಾತಿ, ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.