ಮುಂಬೈ, (ಐಎಎನ್ಎಸ್): ಸಾಮಾಜಿಕ ಧುರೀಣ ಅಣ್ಣಾ ಹಜಾರೆ ಅವರ ತಂಡದ ಕಾರ್ಯಕರ್ತರಾದ ಅರವಿಂದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಮತ್ತು ಕಿರಣ್ ಬೇಡಿ ಅವರು ಭಾನುವಾರ ಮಹಾರಾಷ್ಟ್ರದ ರಾಳೆಗಣಸಿದ್ಧಿ ಗ್ರಾಮವನ್ನು ತಲುಪಿದ್ದಾರೆ.
ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಶನಿವಾರ ನಡೆದ ಅಣ್ಣಾ ತಂಡದ ಪ್ರಮುಖರ (ಕೋರ್ ಕಮಿಟಿ)ಯ ಸಭೆಯಲ್ಲಿ ನಡೆದ ಚರ್ಚೆಗಳ ವಿವರ ನೀಡಲು ಅವರು ರಾಳೆಗಣಸಿದ್ಧಿ ಗ್ರಾಮಕ್ಕೆ ಆಗಮಿಸಿದ್ದಾರೆ.
ಭಾನುವಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡುವ ಅಣ್ಣಾ ತಂಡದ ಪ್ರಮುಖರು, ಅಣ್ಣಾ ಅವರಿಗೆ ನಿನ್ನೆ ಘಾಜಿಯಾಬಾದ್ ನಲ್ಲಿ ನಡೆದ ಸಬೆಯ ನಡಾವಳಿಯ ವಿವರ ನೀಡಲಿದ್ದಾರೆ ಎಂದು ಹಜಾರೆ ಅವರ ಹಿಂದ್ ಸ್ವರಾಜ್ ಟ್ರಸ್ಟ್ ನ ಧರ್ಮದರ್ಶಿ ಅಲ್ಲಾದೀನ್ ಶೇಕ್ ಅವರು ತಿಳಿಸಿದ್ದಾರೆ.
ಶನಿವಾರ ಘಾಜಿಯಾಬಾದ್ ನಲ್ಲಿ ಸಬೆ ಸೇರಿದ್ದ ಅಣ್ಣಾ ತಂಡದ ಪ್ರಮುಖರು, ಕೋರ್ ಕಮಿಟಿ ವಿಸರ್ಜನೆ ಸದ್ಯಕ್ಕೆ ಬೇಡ ಎಂದು ನಿರ್ಣಯಸಿದ್ದರು.
~ ಅಣ್ಣಾ ಅವರು, ಕೋರ್ ಕಮಿಟಿ ವಿಸರ್ಜಿಸಿ, ಬೆರಳೆಣಿಕೆಯ ಜನರಲ್ಲಿ ಅಧಿಕಾರ ಕೇಂದ್ರಿಕೃತವಾಗುವುದು ಬೇಡ, ಕೋರ್ ಕಮಿಟಿ ಸದಸ್ಯರು ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಲಿ ಎಂದು ಸಲಹೆ ನೀಡಿದ್ದರು. ಭಾನುವಾರ ಕೋರ್ ಕಮಿಟಿ ಸದಸ್ಯರೊಂದಿಗೆ ಮಾತಕತೆ ನಡೆಸುವ ಅಣ್ಣಾ ಅವರು ಈ ಕುರಿತು ಒಂದು ನಿರ್ಧಾರಕ್ಕೆ ಬರಲಿದ್ದಾರೆ~ ಎಂದು ಅಲ್ಲಾದೀನ್ ಶೇಕ್ ಅವರು ತಿಳಿಸಿದ್ದಾರೆ.
ಕೋರ್ ಕಮಿಟಿಯ 26 ಜನ ಸದಸ್ಯರಲ್ಲಿ 20 ಜನರು ಶನಿವಾರ ಘಾಜಿಯಾಬಾದ್ ನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು. ಕೋರ್ ಕಮಿಟಿ ತೆಗೆದುಕೊಂಡ ನಿರ್ಣಯಗಳನ್ನು ಅಣ್ಣಾ ಹಜಾರೆ ಅವರ ಗಮನಕ್ಕೆ ತರುವ ಜವಾಬ್ದಾರಿಯನ್ನು ಕೇಜ್ರಿವಾಲ್, ಭರತ್ ಭೂಷಣ್ ಮತ್ತು ಕಿರಣ್ ಬೇಡಿ ಅವರ ತಂಡಕ್ಕೆ ಒಪ್ಪಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.