ADVERTISEMENT

ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೋವಿಂದ್ ಅವರನ್ನು ಎನ್‍ಡಿಎ ಆಯ್ಕೆ ಮಾಡಿದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 17:02 IST
Last Updated 19 ಜೂನ್ 2017, 17:02 IST
ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೋವಿಂದ್ ಅವರನ್ನು ಎನ್‍ಡಿಎ ಆಯ್ಕೆ ಮಾಡಿದ್ದು ಯಾಕೆ?
ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೋವಿಂದ್ ಅವರನ್ನು ಎನ್‍ಡಿಎ ಆಯ್ಕೆ ಮಾಡಿದ್ದು ಯಾಕೆ?   

ಬೆಂಗಳೂರು: ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಹಾರದ ರಾಜ್ಯಪಾಲ ಹಾಗೂ ದಲಿತ ನಾಯಕ ರಾಮನಾಥ ಕೋವಿಂದ್‌ ಅವರ ಹೆಸರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಘೋಷಣೆ ಮಾಡಿದ್ದಾರೆ. ಆದರೆ ರಾಮನಾಥ ಕೋವಿಂದ್ ಯಾರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ರಾಷ್ಟ್ರಪತಿ ಅಭ್ಯರ್ಥಿ ಹೆಸರು ಘೋಷಣೆ ಆದ ನಂತರ ಸಾಮಾಜಿಕ ತಾಣಗಳಲ್ಲಿ ಕೋವಿಂದ್ ಅವರು ಯಾರು ಎಂಬ ಪ್ರಶ್ನೆಯ ಜತೆಗೆ ಅವರ ಕಿರು ಪರಿಚಯವೂ ಹರಿದಾಡುತ್ತಿದೆ.

ಪರಿಚಯ
ಉತ್ತರ ಪ್ರದೇಶದ ದಲಿತ ನಾಯಕರಾಗಿರುವ ಕೋವಿಂದ್ ಅವರಿಗೆ ಈಗ 71 ವರ್ಷ. ಬಿಹಾರದ ರಾಜ್ಯಪಾಲರಾಗಿರುವ ಇವರು ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದರು. ದಲಿತ ಮೋರ್ಚಾ ಅಧ್ಯಕ್ಷರಾಗಿದ್ದ ಇವರು ನ್ಯಾಯವಾದಿ.

ಕಾನ್ಪುರ್ ವಿಶ್ವ ವಿದ್ಯಾಲಯದಿಂದ ವಾಣಿಜ್ಯ ಮತ್ತು ಕಾನೂನು ವಿಷಯದಲ್ಲಿ ಪದವೀಧರಾಗಿರುವ ಇವರು 1977ರಿಂದ 1979 ವರೆಗೆ ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದರು. 1980 ರಿಂದ 1993ರ ವರೆಗೆ  ಸುಪ್ರೀಂಕೋರ್ಟ್‍ನಲ್ಲಿ  ಕೇಂದ್ರ ಸರ್ಕಾರ  ಸ್ಥಾಯಿ ಸಮಿತಿಯಲ್ಲಿದ್ದರು. ಸವಿತಾ ಕೋವಿಂದ್ ಇವರ ಪತ್ನಿ. ಇವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗನಿದ್ದಾನೆ.

ADVERTISEMENT

ಕೋವಿಂದ್ ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?
ರಾಷ್ಟ್ರಪತಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಲ್. ಕೆ ಅಡ್ವಾಣಿ ಅವರ ಹೆಸರು ಈವರೆಗೆ ಕೇಳಿಬರುತ್ತಿತ್ತು. ಆದರೆ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ಅಡ್ವಾಣಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಪರಿಗಣಿಸಲು ಮೋದಿ ಮತ್ತು ಟೀಂ ಹಿಂದೇಟು ಹಾಕಿತ್ತು. ಇದರೆಲ್ಲದರ ನಡುವೆಯೇ ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ್ ಜೋಷಿಯವರ ಹೆಸರೂ ಕೇಳಿ ಬಂದಿತ್ತು.

ಆದಾಗ್ಯೂ, ಅಬ್ದುಲ್ ಕಲಾಂನಂತೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಬಗ್ಗೆಯೂ ಎನ್‍ಡಿಎ ಚಿಂತಿಸಿದ್ದು, ಮೆಟ್ರೊ ಮ್ಯಾನ್ ಇ.ಶ್ರೀಧರನ್ ಅವರ ಹೆಸರು ಇಲ್ಲಿ ಕೇಳಿ ಬಂದಿತ್ತು. ಬಲ್ಲಮೂಲಗಳ ಪ್ರಕಾರ ರಾಷ್ಟ್ರಪತಿ ಸ್ಥಾನಕ್ಕೆ ರಾಜಕೀಯ ಪಕ್ಷದವರನ್ನೇ ಪರಿಗಣಿಸಬೇಕೆಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಆಗ್ರಹಿಸಿತ್ತು.ಈ ವಿಷಯದಲ್ಲಿ ಅಂತಿಮ ತೀರ್ಮಾನ ಆರ್‍ಎಸ್‍ಎಸ್‍ನದ್ದೇ ಎಂದೂ ಹೇಳಲಾಗುತ್ತಿದೆ.

ಈ ಎಲ್ಲ ಲೆಕ್ಕಾಚಾರಗಳ ನಡುವೆಯೇ ದಲಿತರೊಬ್ಬರನ್ನು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿಸಿದರೆ ಉತ್ತಮ ಎಂಬ ಅಭಿಪ್ರಾಯ ಬಿಜೆಪಿಯದ್ದು. ದಲಿತ ನಾಯಕರೊಬ್ಬರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ ಬಿಜೆಪಿಯ ಮೇಲಿರುವ 'ದಲಿತ ವಿರೋಧಿ' ಎಂಬ ಆಪಾದನೆಗಳೂ ದೂರವಾಗಬಹುದು ಎಂಬ ನಿರೀಕ್ಷೆ ಪಕ್ಷದ ನಾಯಕರಿಗಿದೆ.

ಹಿಂದೂ ರಾಷ್ಟ್ರ, ಹಿಂದುತ್ವ ಪ್ರತಿಪಾದಿಸುವ ಬಿಜೆಪಿ ದಲಿತರ ಮನಸು ಗೆಲ್ಲುವುದಕ್ಕಾಗಿ ಈ ಎಲ್ಲ ಕಸರತ್ತು ಮಾಡುತ್ತಿದೆ. ಕೆ. ಆರ್. ನಾರಾಯಣ್ ಅವರ ನಂತರ ಭಾರತದಲ್ಲಿ ಇನ್ನೊಬ್ಬ ದಲಿತ ರಾಷ್ಟ್ರಪತಿ ಸ್ಥಾನಕ್ಕೇರಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಅಷ್ಟೇ ಅಲ್ಲದೆ 2019ರಲ್ಲಿ ಉತ್ತರ ಭಾರತದಲ್ಲಿ ನಡೆಯುವ ಚುನಾವಣೆಯಲ್ಲಿ ದಲಿತರ ಮತ ಬಿಜೆಪಿಗೆ ನಿರ್ಣಾಯಕವಾಗಿದೆ. ಹಾಗಾಗಿ ರಾಮನಾಥ ಕೋವಿಂದ್ ಅವರನ್ನು ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.