ADVERTISEMENT

ರಾಷ್ಟ್ರೀಯ:ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ನ್ಯಾಯಾಲಯಕ್ಕೆ ಪೈಲಟ್‌ಗಳು
ಮುಂಬೈ (ಪಿಟಿಐ): ಬಾಕಿ ವೇತನ ಪಾವತಿ ಸಂಬಂಧ ಕಿಂಗ್‌ಫಿಷರ್ ಆಡಳಿತ ಮಂಡಲಿ ಅಸಹನೀಯ ಮೌನ ತಾಳಿದೆ ಎಂದು ದೂರಿರುವ ಕೆಲವು ಪೈಲಟ್‌ಗಳು, ಪ್ರಕರಣದ ವಿರುದ್ಧ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರೆ.

ಭಾರತದ ವಾದ ತಳ್ಳಿಹಾಕಿದ ಪಾಕ್
ನವದೆಹಲಿ (ಪಿಟಿಐ): ಮುಂಬೈ ದಾಳಿಯಲ್ಲಿ ತಮ್ಮ ರಾಷ್ಟ್ರದ ಸರ್ಕಾರಿ ಸಂಸ್ಥೆಗಳ ಕೈವಾಡವಿದೆ ಎಂಬ ಭಾರತದ ಆಪಾದನೆ `ನಂಬಿಕೆಗೆ ಅನರ್ಹ ಹಾಗೂ ವಿಶ್ವಾಸಾರ್ಹವಲ್ಲದ್ದು~ ಎಂದು ಭಾರತದಲ್ಲಿ ಪಾಕಿಸ್ತಾನದ ಹೊಸ ರಾಯಭಾರಿಯಾಗಿರುವ ಸಲ್ಮಾನ್ ಬಷೀರ್ ಭಾನುವಾರ ಸಮರ್ಥಿಸಿಕೊಂಡಿದ್ದಾರೆ.

ಎಲ್‌ಇಟಿ ಉಗ್ರ ಅಬು ಜುಂದಾಲ್ ಮುಂಬೈ ದಾಳಿಗೆ ಸಂಬಂಧಿಸಿದಂತೆ ಕೆಲವು ಸಂಗತಿಗಳನ್ನು ಬಹಿರಂಗಗೊಳಿಸಿದ ನಂತರ, ಭಾರತವು ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಬಷೀರ್ ಹೀಗೆ ಹೇಳಿದ್ದಾರೆ.

ರಾಜೇಶ್ ಖನ್ನಾ ಗುಣಮುಖ
ಮುಂಬೈ (ಪಿಟಿಐ): ಬಾಲಿವುಡ್ ಹಿರಿಯ ನಟ ರಾಜೇಶ್ ಖನ್ನಾ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ನಿಶ್ಶಕ್ತಿ ಮತ್ತು ರಕ್ತದೊತ್ತಡದ ಕಾರಣ ಶನಿವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಖನ್ನಾ ಗುಣಮುಖರಾಗಿದ್ದು  ಇನ್ನೆರಡು ದಿನಗಳಲ್ಲಿ  ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾ  ಎಂದು ಖನ್ನಾ ಪತ್ನಿ ಡಿಂಪಲ್ ಕಪಾಡಿಯಾ ತಿಳಿಸಿದ್ದಾರೆ.

 ಮನೆಯಲ್ಲಿ  ನಡೆದ `ಆರಾಧನ~ ಆಚರಣೆ ನಿಮಿತ್ತ ಮೂರು ದಿನಗಳ ಕಾಲ ಉಪವಾಸ ಮಾಡಿದ್ದೇ ಅಸ್ವಸ್ಥರಾಗಲು ಕಾರಣ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಹೊಡೆತ: ವಿದ್ಯಾರ್ಥಿಗಳು ಆಸ್ಪತ್ರೆಗೆ
ವಡೋದರಾ (ಪಿಟಿಐ): ಮಧ್ಯಾಹ್ನದ ಊಟದ ವಿಷಯವಾಗಿ ಗಲಾಟೆ ಮಾಡಿದರೆಂಬ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿಗಳನ್ನು ಥಳಿಸಿದ ಘಟನೆ ಇಲ್ಲಿನ ಬ್ರಹ್ಮವಾಸಿನಿ ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
 47 ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳನ್ನು ತೀವ್ರ ಗಾಯಗಳಾದ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ. 

ನಿಧಿ ದುರ್ಬಳಕೆ: ತನಿಖೆ
ನವದೆಹಲಿ (ಪಿಟಿಐ): ಅರೆಸೇನಾ ಪಡೆಗಳ ಯೋಧರಿಗೆ ಎಚ್‌ಐವಿ/ಏಯ್ಡ್ಸ ಕುರಿತು ಅರಿವು ಮೂಡಿಸುವುದಕ್ಕಾಗಿ ಸಾಧನ- ಸಲಕರಣೆಗಳ ಖರೀದಿಗೆ ಬಳಸಬೇಕಿದ್ದ ಹಣವನ್ನು ನಿಯಮಬಾಹಿರವಾಗಿ ಹವಾ ನಿಯಂತ್ರಕ, ಎಲ್‌ಸಿಡಿ ಪರದೆ ಹಾಗೂ ಪೀಠೋಪಕರಣಗಳನ್ನು ಖರೀದಿಸಲು ಬಳಸಿರುವ ಪ್ರಕರಣ ಗೃಹ ಸಚಿವಾಲಯದ ವೈದ್ಯಕೀಯ ಶಾಖೆಯಲ್ಲಿ ನಡೆದಿದೆ. ಈ ಕುರಿತು ಆಂತರಿಕ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.