ADVERTISEMENT

ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 20:25 IST
Last Updated 8 ಸೆಪ್ಟೆಂಬರ್ 2011, 20:25 IST

ಹುದ್ದೆ ಮೇಲ್ದರ್ಜೆಗೆ ಮೀಸಲು ನಿಯಮ ಅನ್ವಯವಾಗದು
ನವದೆಹಲಿ, (ಪಿಟಿಐ):
ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಜಾತಿಯ ಮಿಸಲಾತಿ ಕೋಟಾ ನಿಯಮಗಳು ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿದಾಗ ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಮೀಸಲಾತಿ ಕೋಟಾ ನಿಯಮಗಳನ್ನು ಮುಂಬಡ್ತಿಗೆ ಅನ್ವಯಿಸಬಹುದೇ ವಿನಾ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿದಾಗ ಅನ್ವಯಿಸಬಾರದು ಎಂದು ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಮತ್ತು ಮಾರ್ಕಂಡೇಯ ಕಟ್ಜು ಅವರನ್ನು ಒಳಗೊಂಡ ಪೀಠ ತಿಳಿಸಿದೆ.

ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಚೆನ್ನೈ ಘಟಕ ಮತ್ತು ಮದ್ರಾಸ್ ಹೈಕೋರ್ಟ್, ಮೇಲ್ದರ್ಜೆಗೆ ಏರಿಸಿದ ಹುದ್ದೆಗೂ ಮೀಸಲಾತಿ ಕೋಟಾ ನಿಯಮ ಅನ್ವಯವಾಗುತ್ತದೆ ಎಂದು ನೀಡಿದ್ದ ತೀರ್ಪನ್ನು ಅದು ರದ್ದುಪಡಿಸಿದೆ.

ಗೋಧಿ ರಫ್ತು ನಿರ್ಬಂಧ ರದ್ದು
ನವದೆಹಲಿ, (ಪಿಟಿಐ):
ಕಳೆದ ನಾಲ್ಕು ವರ್ಷಗಳಿಂದ ಜಾರಿಯಲ್ಲಿದ್ದ ಗೋಧಿ ರಫ್ತು ನಿಷೇಧವನ್ನು ರದ್ದುಪಡಿಸಿರುವ ಸರ್ಕಾರವು, ಬೆಲೆ ಏರಿಕೆ ನಿಯಂತ್ರಿಸಲು ಈರುಳ್ಳಿ ರಫ್ತನ್ನು ನಿಷೇಧಿಸಿದೆ.

ದಾಖಲೆ ಗೋಧಿ ಉತ್ಪನ್ನವಾಗಿದ್ದು ಉಗ್ರಾಣದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ, ಆಹಾರಕ್ಕೆ ಸಂಬಂಧಿಸಿದ ಉನ್ನತ ಅಧಿಕಾರದ ಸಚಿವರ ತಂಡ ಈ ನಿರ್ಧಾರ ತೆಗೆದುಕೊಂಡಿದೆ.

ಹಡಗು ಸ್ಫೋಟ- 3 ಭಾರತೀಯರ ಸಾವು
ಅಬುಜಾ, (ಪಿಟಿಐ):
ನೈಜೀರಿಯಾ ಜಲ ಗಡಿಯಲ್ಲಿ ಲೈಬೀರಿಯಾದ ಹಡಗೊಂದು ಸ್ಫೋಟಗೊಂಡಿದ್ದರಿಂದ ಅದರಲ್ಲಿದ್ದ 15 ನಾವಿಕರ ಪೈಕಿ ಭಾರತೀಯ ಮೂಲದ ಮೂವರು ಸತ್ತಿದ್ದಾರೆ. 10 ಜನರನ್ನು ರಕ್ಷಿಸಲಾಗಿದೆ.
ಇಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ದುರಂತವು ನೈಜೀರಿಯಾದ ಅಪಾಪಾ ಬಂದರು ಬಳಿ ಸಂಭವಿಸಿದೆ. ರಕ್ಷಿಸಲಾಗಿರುವ 10 ಭಾರತೀಯರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.