ಮುಂಬೈ (ಐಎಎನ್ಎಸ್): ಸ್ಥಳೀಯ ರೈಲಿನಲ್ಲಿ ಅತಿಯಾದ ಜನದಟ್ಟಣೆಯಿಂದಾಗಿ ಮೂವರು ಪ್ರಯಾಣಿಕರು ಬಿದ್ದು ಮೃತಪಟ್ಟು, 15 ಮಂದಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಕುರ್ಲಾ- ವಿದ್ಯಾವಿಹಾರ್ ನಿಲ್ದಾಣಗಳ ನಡುವಿನ ಸಿಗ್ನಲ್ ನಿಯಂತ್ರಣ ಕೊಠಡಿಯಲ್ಲಿ ಮಂಗಳವಾರ ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡು ನಗರದಲ್ಲಿ ಸ್ಥಳೀಯ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎರಡನೇ ದಿನವಾದ ಗುರುವಾರವೂ ಇದೇ ಸ್ಥಿತಿ ಮುಂದುವರಿದಿತ್ತು. ಈ ನಡುವೆಯೇ, ವಿಳಂಬವಾಗಿ ಸಂಚರಿಸುತ್ತಿದ್ದ ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿಕೊಂಡೇ ಪ್ರಯಾಣಿಸುತ್ತಿದ್ದರು.
`ಕೇಂದ್ರ ರೈಲ್ವೆ ಮಾರ್ಗದಲ್ಲಿರುವ ಭಾಂಡುಪ್ ಹಾಗೂ ನಹುರ್ ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದ್ದಾಗ ಹೊರಭಾಗದಲ್ಲಿ ಕಿಟಕಿಯನ್ನು ಆಧಾರವಾಗಿ ಹಿಡಿದು ನಿಂತುಕೊಂಡಿದ್ದ ಇಬ್ಬರಿಗೆ ಹಳಿಗಳ ಬದಿಯಲ್ಲಿದ್ದ ಕಬ್ಬಿಣದ ಕಂಬ ಡಿಕ್ಕಿ ಹೊಡೆಯಿತು. ಆಗ ಅವರು ಕೆಳಗೆ ಬಿದ್ದು ಸಾವಿಗೀಡಾದರು~ ಎಂದು ಕೇಂದ್ರ ರೈಲ್ವೆ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.