ADVERTISEMENT

ರೈಲುಭವನದ ಬಳಿ ಕೇಜ್ರಿವಾಲ್, ಸಚಿವರ ಪ್ರತಿಭಟನೆ, ಧರಣಿ

'ಆಪ್' ವಿರುದ್ಧ 'ಬಾಪ್' ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2014, 8:22 IST
Last Updated 20 ಜನವರಿ 2014, 8:22 IST
ರೈಲುಭವನದ ಬಳಿ ಕೇಜ್ರಿವಾಲ್, ಸಚಿವರ ಪ್ರತಿಭಟನೆ, ಧರಣಿ
ರೈಲುಭವನದ ಬಳಿ ಕೇಜ್ರಿವಾಲ್, ಸಚಿವರ ಪ್ರತಿಭಟನೆ, ಧರಣಿ   

ನವದೆಹಲಿ (ಪಿಟಿಐ/ ಐಎಎನ್ಎಸ್): ಪೊಲೀಸ್ ನಿಷ್ಕ್ರಿಯತೆಯನ್ನು ಪ್ರತಿಭಟಿಸಿ ಗೃಹ ಸಚಿವಾಲಯದ ಮುಂದೆ ಧರಣಿ ನಡೆಸಲು ಹೊರಟಿದ್ದ ತಮ್ಮನ್ನು ಪೊಲೀಸರು ಮಾರ್ಗ ಮಧ್ಯದಲ್ಲಿಯೇ ತಡೆದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟ ಸದಸ್ಯರು ದೆಹಲಿಯ ರೈಲುಭವನದ ಬಳಿಯೇ ಪ್ರತಿಭಟನಾ ಪ್ರದರ್ಶನ ನಡೆಸಿ, ಅಭೂತಪೂರ್ವ ಧರಣಿ ಆರಂಭಿಸಿದರು.

ಕಳೆದ ತಿಂಗಳಷ್ಟೇ ದೆಹಲಿಯ ಮುಖ್ಯಮಂತ್ರಿ ಪದಕ್ಕೆ ಏರಿದ ಕೇಜ್ರಿವಾಲ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆಗೆ ಮೊದಲೇ ಯೋಜಿಸಿದ್ದಂತೆ ಕೇಂದ್ರ ಸಚಿವಾಲಯ ಬಳಿಯ ಕೇಂದ್ರ ಗೃಹ ಸಚಿವಾಲಯ ಕಚೇರಿಯ ಹೊರಗೆ  ದರಣಿ ನಡೆಸಲು ಬಯಸಿದ್ದರು.

ಕರ್ತವ್ಯ ಚ್ಯುತಿಗಾಗಿ ದೆಹಗಲಿಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಲು ಕೇಜ್ರಿವಾಲ್ ಉದ್ದೇಶಿಸಿದ್ದರು. ದೆಹಲಿ ಉತ್ತರ ಬ್ಲಾಕ್ ಪ್ರದೇಶದಲ್ಲಿ ಸೆಕ್ಷನ್ 144ರ ಅಡಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗೃಹ ಸಚಿವಾಲಯದತ್ತ ಹೊರಟಿದ್ದ ಕೇಜ್ರಿವಾಲ್ ಮತ್ತು ಸಂಪುಟ ಸಹೋದ್ಯೋಗಿಗಳನ್ನು ರೈಲುಭವನದ ಸಮೀಪವೇ ಪೊಲೀಸರು ತಡೆದರು.

ಗಣರಾಜ್ಯೋತ್ಸವ ಪೂರ್ವಾಭ್ಯಾಸದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕಚೇರಿ ಇದ್ದ ದೆಹಲಿ ಉತ್ತರ ಬ್ಲಾಕ್ ಕಡೆಗೆ ಪ್ರತಿಭಟನಕಾರರು ತೆರಳದಂತೆ ಅಡ್ಡಗಟ್ಟೆಗಳನ್ನು ಹಾಕಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬೆಳಗ್ಗೆ 11.20ರ ಸುಮಾರಿಗೆ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ರೈಲು ಭವನ ತಲುಪಿದರು. ಪೊಲೀಸರು ಅವರನ್ನು ಕಾರಿನಿಂದ ಇಳಿದು ಗೃಹ ಸಚಿವರ ಕಚೇರಿಯತ್ತ ಹೋಗಲು ಅವಕಾಶ ನೀಡಲಿಲ್ಲ.

'ಪ್ರತಿಭಟನೆಗಾಗಿ ಯಾರೇ ಬರಲಿ, ಸೆಕ್ಷನ್ 144ರ ಉಲ್ಲಂಘನೆಯಾದಲ್ಲಿ ಅವರನ್ನು ತಡೆಯಲಾಗುವುದು. ಈ ಕ್ಷಣದಲ್ಲಿ ಅವರನ್ನು (ಕೇಜ್ರಿವಾಲ್) ಮುಂದಕ್ಕೆ ಹೋಗದಂತೆ ತಡೆ ಹಿಡಿಯಲಾಗಿದೆ' ಎಂದು ಉಪ ಪೊಲೀಸ್ ಕಮೀಷನರ್ (ನವದೆಹಲಿ) ಎಸ್.ಬಿ.ಎಸ್. ತ್ಯಾಗಿ ನುಡಿದರು.

ಈ ಮಧ್ಯೆ ಭಾರತೀಯ ಆಮ್ ಆದ್ಮಿ ಪಕ್ಷದ (ಬಿಎಎಪಿ- ಬಾಪ್) ಕಾರ್ಯಕರ್ತರು ಕೇಸರಿ ಟೋಪಿಗಳನ್ನು ಧರಿಸಿಕೊಂಡು ಸ್ಥಳಕ್ಕೆ ಆಗಮಿಸಿ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಪೊಲೀಸರು ಅವರನ್ನು ಬಂಧಿಸಿ ಸ್ಥಳದಿಂದ ಆಚೆಗೆ ಕರೆದೊಯ್ದರು.

ಕೇಜ್ರಿವಾಲ್ ಅವರು ಶುಕ್ರವಾರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇನ್ನಷ್ಟು ಸುದ್ದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT