ನವದೆಹಲಿ: ಪ್ರತಿ ಎರಡು ಗಂಟೆಗೊಮ್ಮೆ ಪ್ರಯಾಣಿಕರಿಗೆ ತಾಜಾ ಆಹಾರ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.
ರೈಲಿನಲ್ಲಿ ಪೂರೈಕೆ ಮಾಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ದೂರುಗಳಿವೆ. ಹಾಗಾಗಿ ವಿವಿಧ ನಿಲ್ದಾಣಗಳಲ್ಲಿ ಅಡುಗೆ ಮನೆಗಳನ್ನು ತೆರೆದು ಅಲ್ಲಿ ತಯಾರಿಸುವ ತಾಜಾ ಆಹಾರವನ್ನು ಪ್ರಯಾಣಿಕರಿಗೆ ಪೂರೈಸಲಾಗುವುದು.
ರೈಲ್ವೆಯು ದಿನಂಪ್ರತಿ 11 ಲಕ್ಷ ಪ್ರಯಾಣಿಕರಿಗೆ ಊಟ ಪೂರೈಸು ತ್ತಿದೆ. ಇತ್ತೀಚೆಗೆ ಆರಂಭಿಸಲಾಗಿರುವ ಹೊಸ ‘ಆಹಾರ ಪೂರೈಕೆ’ (ಕೇಟರಿಂಗ್) ನೀತಿಯ ಅಡಿಯಲ್ಲಿ ಆಹಾರ ತಯಾರಿಕೆ ಮತ್ತು ವಿತರಿ ಸುವ ವ್ಯವಸ್ಥೆ ಪ್ರತ್ಯೇಕಿಸಲಾಗಿದೆ.
‘ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡುವುದಕ್ಕಾಗಿ ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ದೇಶದಾದ್ಯಂತ ವಿವಿಧ ನಿಲ್ದಾಣಗಳಲ್ಲಿ ಪಾಕಶಾಲೆಗಳನ್ನು ಆರಂಭಿಸಲಿದ್ದೇವೆ. ಇದರಿಂದ ಎರಡು ಗಂಟೆಗೊಮ್ಮೆ ಪ್ರಯಾಣಿಕರಿಗೆ ತಾಜಾ ಆಹಾರ ಸಿಗಲಿದೆ’ ಎಂದು ಆಹಾರ ಪೂರೈಕೆಗೆ ಸಂಬಂಧಿಸಿದ ದುಂಡು ಮೇಜಿನ ಸಮ್ಮೇಳನದ ಬಳಿಕ ರೈಲ್ವೆ ಸಚಿವ ಸುರೇಶ್ ಪ್ರಭು ಸುದ್ದಿಗಾರರಿಗೆ ತಿಳಿಸಿದರು.