ನವದೆಹಲಿ (ಐಎಎನ್ಎಸ್): ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೋಮವಾರ ಶ್ರೀಲಂಕಾಕ್ಕೆ ಪ್ರಯಾಣ ಬೆಳಸಲಿದ್ದಾರೆ. ಮೂರು ದಿನಗಳ ಈ ಭೇಟಿಯಲ್ಲಿ ಅವರು ದ್ವೀಪ ರಾಷ್ಟ್ರದೊಂದಿಗೆ ಸ್ನೇಹಬಾಂಧವ್ಯ ಮತ್ತು ಖಾಸಗೀಕರಣ ಪ್ರಕ್ರಿಯೆಗೆ ಒತ್ತು ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಮತ್ತು ವಿದೇಶಾಂಗ ಸಚಿವ ಜಿ.ಎಲ್. ಪೆರಿಸ್ ಅವರೊಡನೆ ವಿಸ್ತೃತ ವಿಷಯಗಳ ಕುರಿತು ಕೃಷ್ಣ ಮಾತುಕತೆ ನಡೆಸಲಿದ್ದಾರೆ.
ದ್ವೀಪರಾಷ್ಟ್ರದಲ್ಲಿನ ಬಿಕ್ಕಟ್ಟು ಮತ್ತು ಅಸ್ಥಿರತೆಗೆ ಮೂಲ ಕಾರಣವಾಗಿರುವ ದಶಕಗಳಷ್ಟು ಹಳೆಯದಾದ ಜನಾಂಗೀಯ ತಮಿಳು ಸಮಸ್ಯೆಗೆ ಅಂತಿಮವಾಗಿ ತುರ್ತು ರಾಜಕೀಯ ಪರಿಹಾರವನ್ನು ಹುಡುಕುವ ಅವಶ್ಯಕತೆಯನ್ನು ಸಚಿವರು ಪುನರುಚ್ಚರಿಸಲಿದ್ದಾರೆ.
ಲಂಕಾದಲ್ಲಿ ರಾಷ್ಟ್ರೀಯ ಸಾಮರಸ್ಯ ಮತ್ತು ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯತೆಗಳ ಬಗ್ಗೆ ಕೃಷ್ಣ ಅಲ್ಲಿನ ನಾಯಕರಿಗೆ ಮನವರಿಕೆ ಮಾಡಿಕೊಡುವ ನಿರೀಕ್ಷೆಯಿದೆ.
ಸಚಿವರು ತಮಿಳು ರಾಷ್ಟ್ರೀಯ ಮೈತ್ರಿಕೂಟ (ಟಿಎನ್ಎ)ದ ಪ್ರತಿನಿಧಿಗಳನ್ನು ಸಹ ಭೇಟಿಯಾಗಿ, ತಮಿಳು ಪ್ರಾಬಲ್ಯವಿರುವ ಪ್ರಾಂತ್ಯಗಳಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಲಂಕಾ ನಾಯಕರೊಡನೆ ನಡೆಸುವ ಮಾತುಕತೆಯ ಬಗ್ಗೆ ಪ್ರತಿಕ್ರಿಯೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ತಮಿಳು ಪ್ರಾಂತ್ಯಗಳಲ್ಲಿ ಭೂ ಮತ್ತು ಪೊಲೀಸ್ ಅಧಿಕಾರಗಳನ್ನು ತಮಗೆ ವರ್ಗಾಯಿಸುವಂತೆ ಟಿಎನ್ಎ ಕೇಳುತ್ತಿದೆ. ಆದರೆ ಇದಕ್ಕೆ ನಿರಾಕರಿಸಿರುವ ರಾಜಪಕ್ಸೆ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಆಹ್ವಾನ ನೀಡಿದ್ದಾರೆ.
ಯುದ್ಧದಿಂದ ನಿರ್ಗತಿಕರಾಗಿರುವ ನಾಗರಿಕರಿಗೆ ಪುನರ್ವಸತಿ ಕಲ್ಪಿಸಲು ಭಾರತ ಸರ್ಕಾರದ ನೆರವಿನೊಂದಿಗೆ ನಿರ್ಮಾಣವಾಗುತ್ತಿರುವ ಸುಮಾರು 50 ಸಾವಿರ ಮನೆಗಳ ಪ್ರಗತಿಯನ್ನು ಕೂಡಾ ಕೃಷ್ಣ ಪರಿಶೀಲಿಸಲಿದ್ದಾರೆ.
ಭಾರತದ ರಿಯಾಯಿತಿ ಸಹಾಯಧನದಲ್ಲಿ ಪುನರ್ನಿರ್ಮಾಣಗೊಳ್ಳುತ್ತಿರುವ ಗಾಲೆಯ ದಕ್ಷಿಣ ರೈಲ್ವೆ ಯೋಜನೆಯನ್ನು ಸಹ ಸಚಿವರು ಉದ್ಘಾಟಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.