ನವದೆಹಲಿ : ‘ಲೋಕಪಾಲ ಆಯ್ಕೆ ಸಮಿತಿಗೆ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
‘ಲೋಕಪಾಲರನ್ನು ನೇಮಿಸಿ ಎಂದು ಸುಪ್ರೀಂ ಕೋರ್ಟ್ 2017ರ ಏಪ್ರಿಲ್ನಲ್ಲಿ ಆದೇಶಿಸಿದ್ದರೂ, ಕೇಂದ್ರ ಸರ್ಕಾರ ಆ ಸಂಬಂಧ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಇದು ನ್ಯಾಯಾಂಗ ನಿಂದನೆ’ ಎಂದು ಆರೋಪಿಸಿ ಕಾಮನ್ ಕಾಸ್ ಎಂಬ ಸ್ವಯಂಸೇವಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿ ನೀಡಿದೆ.
ಈ ಸಮಿತಿಯಲ್ಲಿ ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್, ಲೋಕಸಭೆಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ವಿರೋಧ ಪಕ್ಷದ ನಾಯಕ ಮತ್ತು ಒಬ್ಬ ಕಾನೂನು ತಜ್ಞರು ಇರಬೇಕು. ಈ ಹಿಂದೆ ಹಿರಿಯ ವಕೀಲ ಪಿ.ಪಿ.ರಾವ್ ಅವರನ್ನು ಸರ್ಕಾರ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಆದರೆ ರಾವ್ ಅವರು 2017ರ ಸೆ. 11ರಂದು ನಿಧರಾದ ಕಾರಣ ಆ ಸ್ಥಾನ ತೆರವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.